ನರಸಿಂಹರಾಜಪುರ: ಭಾರತದಲ್ಲಿ 10 ಕೋಟಿ ಜನರು ವಿವಿಧ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೊಪ್ಪದ ನರ ಮತ್ತು ಮಾನಸಿಕ ರೋಗ ತಜ್ಞ ಡಾ.ನಿರಂಜನ ಹೆಬ್ಬಾರ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗವು ರೋಟರಿ ಸಹಯೋಗ
ದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನಸಿಕ ರೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
10 ಕೋಟಿ ಜನರಲ್ಲಿ ಶೇ 1ರಷ್ಟು ಜನರು ತೀವ್ರ ತರ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿನಿತ್ಯ ಮಾನಸಿಕ ರೋಗದಿಂದಲೇ 420 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2.8 ಕೋಟಿ ಜನರು ಮದ್ಯವ್ಯಸನಿಗಳಾಗಿದ್ದಾರೆ. 27ಲಕ್ಷ ಜನರು ಗಾಂಜಾ, 26 ಲಕ್ಷ ಜನರು ಹೆರಾಯಿನ್ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೋವಿಡ್ ಬಂದ ನಂತರ ಮಾನಸಿಕ ಕಾಯಿಲೆಯಿಂದ ಬಳಲುವವರ ಸಂಖ್ಯೆ ಶೇ25ರಷ್ಟು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಈ.ಸಿ.ಜೋಯಿ ಮಾತನಾಡಿ, ‘ಮನುಷ್ಯನಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯವಾಗಿದೆ’ ಎಂದರು.
ಪ್ರಾಂಶುಪಾಲ ಡಾ.ಕೆ.ಉಮೇಶ್ ಮಾತನಾಡಿ, ಮನಸ್ಸು ಸ್ವಚ್ಛವಾಗಿಟ್ಟು ಕೊಂಡರೆ ಮನಸ್ಸಿನ ಕಾಯಿಲೆ ಕಡಿಮೆಯಾಗುತ್ತದೆ ಎಂದರು.
ರೋಟರಿ ಕಾರ್ಯದರ್ಶಿ ಶ್ರೀಕಾಂತ್, ನಿಕಟಪೂರ್ವ ಕಾರ್ಯದರ್ಶಿ ಕೆ.ಎಸ್.ರಾಜಕುಮಾರ್, ಉಪನ್ಯಾಸಕರಾದ ರುಖಿಯತ್, ಇಸ್ರತ್ ಭಾನು, ಹೇಮಲತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.