ಬಾಳೆಹೊನ್ನೂರು: ‘ಮೀನುಗಾರಿಕೆ ಸಚಿವರ ಆದೇಶದಂತೆ ಭದ್ರಾ ಮತ್ತು ತುಂಗಾ ನದಿಗೆ ತಲಾ 2 ಲಕ್ಷದಂತೆ ಒಟ್ಟು 4 ಲಕ್ಷ ಮೀನು ಮರಿಗಳನ್ನು ಬಿಡಲಾಗುತ್ತಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಮರಿಗಳನ್ನು ನದಿಗೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಭದ್ರಾ ಡ್ಯಾಮ್ನ ಹಿನ್ನೀರಿಗೆ ಈಗಾಗಲೇ 1.10 ಕೋಟಿ ಮೀನು ಮರಿ ಬಿಡಲಾಗಿದೆ. ಇದೇ ಪ್ರಥಮ ಬಾರಿಗೆ ನದಿ ಭಾಗದಲ್ಲಿ ಮೀನು ಬಿಡಬೇಕು ಎಂಬ ಯೋಚನೆ ಮಾಡಿ ಮೀನುಗಾರಿಕೆ ಸಚಿವರ ಆದೇಶದಂತೆ ಬಾಳೆಹೊನ್ನೂರಿನಲ್ಲಿ ಭದ್ರಾನದಿಗೆ ಹಾಗೂ ಕೊಪ್ಪದ ನಾರ್ವೆ ಬಳಿಯ ತುಂಗಾ ನದಿಗೆ ಮೀನು ಮರಿಗಳನ್ನು ಬಿಡಲಾಗುತ್ತಿದೆ’ ಎಂದರು.
ಭದ್ರಾ, ತುಂಗಾ ನದಿಗಳಿಗೆ ಗೌರಿ, ಕಾಟ್ಲಾ, ರೌಹು, ಗೊಜಲೆ, ಸುರಗಿ ಸೇರಿದಂತೆ ವಿವಿಧ ತಳಿಯ ಮೀನುಗಳನ್ನು ಬಿಡಲಾಗಿದ್ದು, ಇವು ಒಂದು ವರ್ಷದಲ್ಲಿ ಒಂದೂವರೆಯಿಂದ ಎರಡು ಕೆ.ಜಿಯವರೆಗೆ ಬೆಳೆಯಲಿವೆ ಎಂದು ಅವರು ಹೇಳಿದರು.
ಮೀನುಗಾರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಪ್ರಕಾಶ್, ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ, ಸದಸ್ಯರಾದ ಎಂ.ಎಸ್.ಅರುಣೇಶ್, ಶಿವಪ್ಪ, ಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಕಾಂಗ್ರೆಸ್ ಮುಖಂಡ ಕೆ.ಎಸ್.ರವೀಂದ್ರ ಕುಕ್ಕುಡಿಗೆ, ಪ್ರಮುಖರಾದ ಹಿರಿಯಣ್ಣ, ಸುಕುಮಾರ್, ಪ್ರಶಾಂತ್, ರಿಚರ್ಡ್ ಮಥಾಯಿಸ್, ಸುಧಾಕರ್, ಜಾನ್ ಡಿಸೋಜ, ಕಾರ್ತಿಕ್ ಹುಣಸೇಕೊಪ್ಪ, ರವೀಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.