ಚಿಕ್ಕಮಗಳೂರು: ಅತಿ ಸಣ್ಣ ರೈತರು ಜೀವನೋಪಾಯಕ್ಕೆ ಅನ್ಯಮಾರ್ಗ ಹುಡುಕುವ ಬದಲು ತುಂಡು ಭೂಮಿಯಲ್ಲಿ ಮನೆ ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡರೆ ನಿರಂತರವಾಗಿ ವರಮಾನ ಸಂಪಾದಿಸಬಹುದು ಎಂದು ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಾಯಣಪುರ ತಿಳಿಸಿದರು.
ಸಾವಯವ ರೈತರ ಬಳಗ ಮೂಗ್ತಿಹಳ್ಳಿ ವತಿಯಿಂದ ಚಂದ್ರಶೇಖರ ನಾರಣಾಪುರ ಅವರ ಕೃಷಿ ನಿವಾಸದಲ್ಲಿ ಏರ್ಪಡಿಸಿದ್ದ ಧನ-ಧಾನ್ಯ ಉತ್ಪಾದನ ಕ್ಷೇತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಎಕರೆ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಬಾಳೆ ಮತ್ತು ಜಾಯಿಕಾಯಿ, ಧಾನ್ಯ ಬೆಳೆಗಾಳದ ಭತ್ತ, ರಾಗಿ, ಅವರೆ ಮತ್ತು ಪೌಷ್ಟಿಕ ಆಹಾರಳಾದ ತೊಗರಿ, ಅಲಸಂದೆ ಬೆಳೆಯಲಾಗಿದೆ. ಸ್ವಯಂ ಬೀಜೋತ್ಪಾದನೆ ಮೂಲಕ ಬೆಳೆಯುವ ಹೊನಗನ್ನೆ, ಕಟಣಿಗೆ ಮತ್ತು ಗಣಿಕೆ ಸೊಪ್ಪು ಬೆಳೆದಿರುವುದರಿಂದ ಆರ್ಥಿಕ ಸದೃಢತೆ ಮತ್ತು ಪೌಷ್ಟಿಕ ಸದೃಢತೆ ಸಾಧಿಸಬಹುದಾಗಿದೆ ಎಂದರು.
ಇಂತಹ ಧನ-ಧಾನ್ಯ ಉತ್ಪಾದಕ ಮಾದರಿ ಕ್ಷೇತ್ರವನ್ನು ಇಲ್ಲಿ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಅತಿ ಸಣ್ಣ ರೈತರಿಗೆ ಅರಿವು ಮೂಡಿಸುವ ಸಲುವಾಗಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಚಿಕ್ಕಮಗಳೂರು, ತುಮಕೂರು, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ 50 ರೈತರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೇನಾಧಿಕಾರಿ ಬಿ.ಎಸ್. ರಾಜು ಮಾತನಾಡಿ, ‘ಕೃಷಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಕೃಷಿ ಮತ್ತು ಕೃಷಿ ಕುಟುಂಬಗಳು ಅಭಿವೃದ್ಧಿಯಾಗುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸುವ ಮೂಲಕ ಹೂಸತನ ಕಲಿಯಬೇಕು’ ಎಂದು ಹೇಳಿದರು.
ಕೃಷಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ಚವಾಣ್, ತಿಪಟೂರಿನ ಅಕ್ಷಯಕಲ್ಪ ಸಂಸ್ಥೆಯ ಅಧಿಕಾರಿ ರಘುರಾಂ, ಪ್ರಗತಿಪರ ಕೃಷಿಕ ಕುಮಾರಸ್ವಾಮಿ ಉಪಸ್ಥಿತರಿದ್ದರು. ಬಳಗದ ಮುಖ್ಯಸ್ಥ ಭಾರತ್ ಬಿಸ್ಲೆರೆ, ನಂದಕುಮಾರ್, ದರ್ಶನ್ ಭಾಗವಹಿಸಿದದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.