ನರಸಿಂಹರಾಜಪುರ: ಲಾಕ್ಡೌನ್ ಆದೇಶದಿಂದ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಾಣಿಜ್ಯ ಬೆಳೆಗಳನ್ನು ಕೊಳ್ಳುವ ಗ್ರಾಹಕರಿಲ್ಲದೆ ತೋಟ ದಲ್ಲಿಯೇ ಬೆಳೆಗಳು ಕೊಳೆಯುತ್ತಿವೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ಭತ್ತವನ್ನು ಬೆಳೆದಿದ್ದು, ಇದಕ್ಕೆ ಈಗಾಗಲೇ ಬೆಲೆ ಕುಸಿತವಾಗಿದೆ. ಭತ್ತವನ್ನು ಮಾರಾಟ ಮಾಡಲು, ಕೊಳ್ಳಲು ವ್ಯಾಪಾರಸ್ಥರು ಬರುತ್ತಿಲ್ಲ. ಅಕ್ಕಿಯನ್ನು ಮಾಡಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿ ರೈತರನ್ನು ಕಾಡುತ್ತಿದೆ.
ರಬ್ಬರ್ ಬೆಳೆಗಾರರು ರಬ್ಬರ್ ಶೀಟ್ ಮಾರಾಟ ಮಾಡಲು ಕೊಳ್ಳುವ ಅಂಗಡಿಗಳು ಬಾಗಿಲು ಮುಚ್ಚಿವೆ. ರೈತರು ನೇಂದ್ರ ಮತ್ತಿತರ ಬಾಳೆ ಬೆಳೆಯನ್ನು ಬೆಳೆದು ಮಂಗಳೂರು, ಕೇರಳ ಮತ್ತಿತತರ ಪ್ರದೇಶಗಳಿಗೆ ಪೂರೈಸುತ್ತಿದ್ದರು. ಪ್ರಸ್ತುತ ಸಂಚಾರ ಸ್ಥಗಿತಗೊಂಡಿರುವುದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಗಿಡದಲ್ಲಿಯೇ ಹಣ್ಣಾಗಿ ಕೊಳೆಯುತ್ತಿದೆ.
ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಹುತೇಕ ರೈತರು ಬಾಳೆ, ಶುಂಠಿ, ಸುವರ್ಣಗೆಡ್ಡೆ ಮತ್ತಿತರ ವಾಣಿಜ್ಯ ಬೆಳೆಗಳನ್ನು ನಾಟಿ ಮಾಡಲು ವ್ಯಾಪಾರಸ್ಥರಿಂದ ಮುಂಗಡವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ವಾಣಿಜ್ಯ ಬೆಳೆಗಳನ್ನು ಸಮರ್ಪಕವಾಗಿ ಮಾರಾಟವಾಗದಿರುವುದರಿಂದ ವ್ಯಾಪಾರಸ್ಥರು ಯಾವುದೇ ಮುಂಗಡ ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಈ ಬೆಳೆಗಳ ನಾಟಿ ಕಾರ್ಯವೂ ಸ್ಥಗಿತಗೊಂಡಿದೆ. ವ್ಯಾಪಾರಸ್ಥರು ಮತ್ತು ಬೆಳೆಗಾರರ ನಡುವೆ ಇದ್ದ ವ್ಯವಹಾರದ ಕೊಂಡಿ ಕಳಿಚಿ ಬಿದ್ದಿರುವುದರಿಂದ ಹಣಕಾಸಿನ ಸಮಸ್ಯೆಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಿಂದಾಗಿ ಹೊಸದಾಗಿ ಬೆಳೆ ನಾಟಿ ಮಾಡಲು ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಮತ್ತಿತತರ ಪರಿಕರಗಳನ್ನು ಕೊಳ್ಳಲು ಸಾಧ್ಯವಾಗದೆ ಭವಿಷ್ಯದ ಚಿಂತೆ ಕೃಷಿಕರನ್ನು ಕಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.