ತರೀಕೆರೆ: ಕೊರೊನಾ ವೈರಸ್ ಸೊಂಕು ತಡೆಗಟ್ಟಲು ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿರುವುದರಿಂದ ತೋಟಗಳಲ್ಲಿ ಬೆಳೆದು ನಿಂತ ಮಾವು ಕಟಾವಿಲ್ಲದೇ ರೈತ ಹಾಗೂ ಚೇಣಿದಾರನಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲ್ಲೂಕಿನಲ್ಲಿ ಅಡಿಕೆಯ ನಂತರ ಹೇರಳವಾಗಿ ಬೆಳೆಯಾಗುವ ಮಾವನ್ನು ಒಟ್ಟು 13 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆಲಾಗುತ್ತದೆ. ಬಾದಾಮಿ, ರಸಪೂರಿ, ನೀಲಂ, ತೊತಾಪುರಿ, ಆ್ಯಮ್ಲೇಟ್, ಜೀರಿಗೆ ಮಾವು, ರಾಜಪುರಿ, ಮಲಗೂಬ ಸೇರಿದಂತೆ ಅನೇಕ ಜಾತಿಯ ನಾಟಿ ಮಾವುಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಈ ಮೂಲಕ ಹೊರ ರಾಜ್ಯದ ಮಾವು ಮಾರುಕಟ್ಟೆಗಳಲ್ಲಿ ತಾಲ್ಲೂಕಿನ ಮಾವಿಗೆ ಬಲು ಬೇಡಿಕೆ.
ಕಳೆದ ವರ್ಷ ಸತತವಾಗಿ ಸುರಿದ ಮಳೆಯಿಂದಾಗಿ ಮಾವು ಕಟಾವು ಮಾಡದೇ ರೈತರು ಮರದಲ್ಲಿಯೇ ಬಿಟ್ಟು ನಷ್ಟ ಅನುಭವಿಸಿದ್ದರು. ಕಳೆದ ವರ್ಷ ಮಳೆ ಸುರಿದ ಕಾರಣ ಈ
ವರ್ಷವು ಫಸಲು ತಡವಾಗಿ ಆರಂಭವಾಗಿದೆ. ಮಾರ್ಚ್ ತಿಂಗಳ ಕೊನೆ ಮತ್ತು ಏಪ್ರಿಲ್ ತಿಂಗಳ ಆರಂಭದಲ್ಲಿ ಶೇ 50ರಷ್ಟು ಮಾವು ಕಟಾವಿಗೆ ಬರುತ್ತದೆ. ರೈತರು ಮತ್ತು ಚೇಣಿದಾರರು ಮಾವು ಕಟಾವಿಗೆ ಸಿದ್ಧತೆ ನಡೆಸುವ ಸಮಯದಲ್ಲಿಯೇ ದುತ್ತನೆ
ಎರಗಿದ ಲಾಕ್ಡೌನ್ನಿಂದಾಗಿ ತೋಟದತ್ತ ರೈತರು ಸುಳಿಯ ದಂತಾಗಿದ್ದಾರೆ.
‘ಮಾವು ಕಟಾವಿಗೆ ದಿನವೊಂದಕ್ಕೆ ಆರೇಳು ಮಂದಿ ಕನಿಷ್ಠವಾಗಿಯಾದರೂ ಬೇಕು. ಆದರೆ, ಕೂಲಿ ಕೆಲಸಗಾರರು ಮನೆಯಿಂದ ಹೊರ ಬರುತ್ತಿಲ್ಲ. ಮಾವು ಕಟಾವಾದರೆ ಸಾಗಿಸಲು ವಾಹನಗಳು ಸಂಚಾರಕ್ಕೆ ಸಿದ್ಧವಿಲ್ಲ. ಮಾರುಕಟ್ಟೆಯಲ್ಲಿ ಮಾವು ಖರೀದಿಸಲು ಗ್ರಾಹಕರು ಬಂದಾರು ಎಂಬ ಭರವಸೆ ಉಳಿದಿಲ್ಲ’ ಎಂದು ಚೇಣಿದಾರ ಮೀರ್ ಸಮಿಉಲ್ಲಾ ಹಸನ್ ಹೇಳುತ್ತಾರೆ.
ಚೇಣಿದಾರರು ಮುಂಗಡ ಮಾತ್ರ ಕೊಟ್ಟು ಮಾವು ಕಟಾವಿನ ಸಮಯದಲ್ಲಿ ಪೂರ್ತಿ ಹಣ ನೀಡುವುದು ಮಾವಿನ ವ್ಯಾಪಾರದ ನಿಯಮವಾಗಿದೆ. ಕಟಾವಿಗೆ ಬಾರದ ಚೇಣಿದಾರರು ಹಣ ನೀಡುವ ನಂಬಿಕೆಯಿಲ್ಲದಂತಾಗಿದ್ದು, ಆಗುವ ನಷ್ಟದ ಬಗ್ಗೆ ರೈತರು ನೋವು ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.