
ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿ ಪ್ರತಿ ಶನಿವಾರ ಹೋಬಳಿ ಮಟ್ಟದ ಸಂತೆ ಹಲವು ದಶಕಗಳಿಂದ ನಡೆಯುತ್ತಾ ಬಂದಿದೆ.
ಸಂತೆ ವೇಳೆ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಗೂಟ ಹೊಡೆದು ಟಾರ್ಪಾಲ್ ಕಟ್ಟುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ನೂತನವಾಗಿ ನಿರ್ಮಿಸಿದ ಬಾಕ್ಸ್ ಚರಂಡಿಯ ನೀರು ಹರಿಯುವ ಮೋರಿಯನ್ನು ಒಬ್ಬ ವ್ಯಾಪಾರಿ ಮುಚ್ಚಿರುವ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಹಸೈನಾರ್ ಮತ್ತು ಪಿಡಿಒ ಶಂಶೂನ್ ನಹರ್ ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ಅಂಗಡಿ ನಿರ್ಮಿಸಿ ಟ್ರಾಫಿಕ್ ಜಾಮ್ ಉಂಟುಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಮೋರಿಯನ್ನು ಮುಚ್ಚಿದ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು, ಇದೇ ರೀತಿಯ ಘಟನೆ ಮುಂದುವರಿದರೆ ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಎ.ಯು. ಇಬ್ರಾಹಿಂ, ಶಿವಾನಂದ, ನಾಗರಾಜ್ ಎ.ಆರ್., ಕರವೇ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಅಲಿ ಅವರು ಮಾತನಾಡಿ, ಮೋರಿಯನ್ನು ಮುಚ್ಚಿರುವವರ ಮೇಲೆ ತಕ್ಷಣ ಕ್ರಮ ಕೈಗೊಂಡು, ರಸ್ತೆ ಬದಿಯಲ್ಲಿ ಸಂತೆ ಹಾಕಿ ತೊಂದರೆ ನೀಡುವವರಿಗೆ ದಂಡ ವಿಧಿಸಿದರೆ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.