
ಆಲ್ದೂರು: ಆಲ್ದೂರು ಪಂಚಾಯಿತಿ ವ್ಯಾಪ್ತಿ ಹೊಸಳ್ಳಿ ಗ್ರಾಮ ಮತ್ತು ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿ ಯಲಗುಡಿಗೆ ಗ್ರಾಮದ ಬಳಿ ಕೋಳಿ ಕಸಗಳನ್ನು ತಂದು ಹಾಕಲಾಗುತ್ತಿದೆ.
ಆಲ್ದೂರಿನಿಂದ ಆರಂಭವಾಗುವ ಸಂಪರ್ಕ ರಸ್ತೆಯು ಹಾಂದಿ ಗ್ರಾಮದ ಬಳಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 173 ರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಈ ರಸ್ತೆ ಬದಿಯಲ್ಲಿ ವಿಪರೀತ ಕೋಳಿ ಕಸವನ್ನು ಸುರಿಯಲಾಗಿದೆ. ಇದರಿಂದ ದುರ್ವಾಸನೆಯ ಜತೆಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.
‘ಎರಡು ಗ್ರಾಮಗಳ ನಡುವಿನ ರಸ್ತೆ ಬದಿ ನಮ್ಮ ಕಾಫಿ ತೋಟವಿದ್ದು, ಮೊದಲಿಗೆ ಪ್ಲಾಸ್ಟಿಕ್ ಕಸವನ್ನು ಎಸೆಯುತಿದ್ದರು.ಈಗ ನಸುಕಿನ ಜಾವ ಕೋಳಿ ಕಸವನ್ನು ಪ್ಲಾಸ್ಟಿಕ್ ಮೂಟೆಗಳಲ್ಲಿ ತಂದು ಹಲವು ವರ್ಷಗಳಿಂದ ತಂದು ಸುರಿಯುತ್ತಿದ್ದಾರೆ. ಹೊಸಳ್ಳಿ ಗ್ರಾಮದಿಂದ ಯಲಗುಡಿಗೆ ಗ್ರಾಮದವರೆಗೂ ರಸ್ತೆ ಬದಿ ಆಳೆತ್ತರದ ಗಿಡಗಂಟಿಗಳು ಬೆಳೆದಿರುವುದು ಕಸ ಎಸೆಯುವವರಿಗೆ ಇನ್ನಷ್ಟು ಅನುಕೂಲವಾಗಿದೆ. ಇನ್ನು ಕೆಲವರು ಸತ್ತ ಪ್ರಾಣಿಗಳನ್ನು ತಂದು ಇಲ್ಲಿಯೇ ಎಸೆಯುತ್ತಿದ್ದಾರೆ. ಕೋಳಿ ಕಸ ಹಾಗೂ ಸತ್ತ ಪ್ರಾಣಿಗಳ ಕಳೇಬರದಿಂದ ಬರುವ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಎದುರಾಗಿದೆ. ಎರಡು ಪಂಚಾಯಿತಿ ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿಕ ಅರವಿಂದ್ ಬಿ.ಪಿ ಹೇಳಿದರು.
‘ಎರಡು ಪಂಚಾಯಿತಿ ಆಡಳಿತವು ತಮ್ಮ ವ್ಯಾಪ್ತಿಯ ಗಡಿಭಾಗದವರೆಗೂ ಕಸ ಹಾಕದಂತೆ ಸೂಚನಾ ಫಲಕ ಅಳವಡಿಕೆ, ಕಸ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಅಲಿ ಒತ್ತಾಯಿಸಿದರು.
‘ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಶೀಘ್ರದಲ್ಲಿಯೇ ನಡೆಯಲಿದ್ದು, ಸಭೆಯಲ್ಲಿ ಸಮಸ್ಯೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಆಲ್ದೂರು ಪಂಚಾಯಿತಿ ಅಧ್ಯಕ್ಷೆ ಜುಬೇದ ಹಸೈನಾರ್ ಹೇಳಿದರು.
‘ಎರಡು ಪಂಚಾಯಿತಿಯ ಗಡಿಭಾಗ ಆಗಿರುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಯಲಗುಡಿಗೆ ಗ್ರಾಮದವರೆಗೆ ಸ್ವಚ್ಛತೆ ಕೈಗೊಂಡು ಕಸ ಹಾಕದಂತೆ ಸೂಚನಾ ಫಲಕ ಹಾಕಲಾಗುವುದು. ಈ ಭಾಗದಲ್ಲಿ ಕಸ ತಂದು ಸುರಿಯುವವರ ಮಾಹಿತಿಯನ್ನು ನೀಡಿದವರನ್ನು ಅಭಿನಂದಿಸಲಾಗುವುದು’ ಎಂದು ಸತ್ತಿಹಳ್ಳಿ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಹೇಳಿದರು.
ಎರಡು ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ರಸ್ತೆ ಬದಿ ಕೋಳಿ ಕಸದ ರಾಶಿ | ಕಸ ಹಾಕುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.