ಚಿಕ್ಕಮಗಳೂರು: ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿದ್ದ ಮೂತ್ರ ನೆಕ್ಕಿಸಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಯುವಕ ನೀಡಿರುವ ದೂರಿಗೆ ಸಂಬಂಧಿಸಿದಂತೆ ಪಿಎಸ್ಐ ಕೆ.ಅರ್ಜುನ್ ಹೊರಕೇರಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಯ ಪಿಎಸ್ಐ ಅವರು ಬಾಯಿಗೆ ಮೂತ್ರ ಹುಯ್ಯಿಸಿ, ಹಿಗ್ಗಾಮುಗ್ಗಾ ಥಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಕಿರುಗುಂದ ಗ್ರಾಮದ ಯುವಕ ಕೆ.ಎಲ್.ಪುನೀತ್ ಅವರು ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ಪೊಲೀಸ್ ಮಹಾನಿರ್ದೇಶಕ, ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿಗೆ ದೂರು ಪ್ರತಿಗಳನ್ನು ರವಾನಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಡಿವೈಎಸ್ಪಿಗೆ ಹೊಣೆ ವಹಿಸಲಾಗಿತ್ತು. ವಿಚಾರಣೆ ನಡೆಸಿ ಅವರು ವರದಿ ನೀಡಿದ್ದಾರೆ. ಗೋಣಿಬೀಡು ಠಾಣೆ ಪಿಎಸ್ಐ ಅರ್ಜುನ್ ಅವರನ್ನು ಡಿಸಿಆರ್ಬಿಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.
ಪುನೀತ್ ದಾಖಲಿಸಿರುವ ದೂರಿನ ಸಾರಾಂಶ: ಇದೇ 10ರಂದು ಬೆಳಿಗ್ಗೆ 7.30 ರ ಹೊತ್ತಿನಲ್ಲಿ ಕೆಲವರು ನಮ್ಮ ಮನೆ ಬಳಿಗೆ ಬಂದರು. ಮಹಿಳೆಗೆ ಫೋನ್ ಮಾಡಿದ್ದೀಯಾ ನಿನ್ಹತ್ರ ಮಾತನಾಡಬೇಕು ಬಾ ಎಂದು ಕರೆದರು. ಅವರು ತುಂಬಾ ಜನ ಇದ್ದಿದ್ದರಿಂದ ನಾನು ಹೊರ ಹೋಗಲಿಲ್ಲ. ಅವರು ಮನೆ ಸುತ್ತುವರಿದಿದ್ದರು.
ರಕ್ಷಣೆಗಾಗಿ 112ಗೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿದರು. ಅವರು ಗೋಣಿಬೀಡು ಠಾಣೆ ಪಿಎಸ್ಐಗೆ ಕರೆ ಮಾಡಿದರು. ಪಿಎಸ್ಐ ಬಂದು ನನ್ನನ್ನು ಏನೂ ವಿಚಾರಣೆ ಮಾಡದೆ ಜೀಪು ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು, ಠಾಣೆಗೆ ಕರೆದೊಯ್ದರು.
ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದರು. ಮಹಿಳೆ ಜೊತೆಗೆ ಎಷ್ಟು ದಿನದಿಂದ ಸಂಬಂಧ ಇತ್ತು ಎಂದು ಕೇಳಿದರು. ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್ನಲ್ಲಿ ಮಾತಾಡಿದ್ದೆ, ಈ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು, ಆನಂತರ ಫೋನ್ ಮಾಡಿಲ್ಲ ಎಂದು ಹೇಳಿದೆ. ಪಿಎಸ್ಐ ಕೆಟ್ಟದಾಗಿ ಬೈದರು.
ಎಷ್ಟು ಬೇಡಿಕೊಂಡರೂ ಕೇಳಲಿಲ್ಲ, ಒಪ್ಪಿಕೊ ಎಂದು ಹಿಂಸೆ ಮಾಡಿದರು. ನನ್ನನ್ನು ಬಿಡಿ ಎಂದು ಕೇಳಿಕೊಂಡೆ. ನಂತರ ಬಿಡುತ್ತೇನೆ ಒಪ್ಪಿಕೊ ಎಂದು ಹೊಡೆದರು. ಕೈಕಾಲಿನಲ್ಲಿ ರಕ್ತ ಬರುತ್ತಿತ್ತು. ಅವರು ಹೇಳಿದಂತೆ ಒಪ್ಪಿಕೊಂಡೆ.
ನನ್ನ ಜಾತಿ ಯಾವುದು ಎಂದು ಪಿಎಸ್ಐ ಕೇಳಿದರು. ಎಸ್ಸಿ ಎಂದು ಹೇಳಿದೆ. ತುಂಬಾ ಕೆಟ್ಟದಾಗಿ ಬೈದರು.
ಬಾಯಾರಿಕೆಯಾಗಿದೆ ನೀರು ಕೊಡಿ ಎಂದು ಕೇಳಿದೆ. ವ್ಯಕ್ತಿಯೊಬ್ಬನನ್ನು ಕರೆಸಿ ಬಾಯಿಗೆ ಉಚ್ಚೆ ಮಾಡಿಸಿದರು. ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕಿಸಿದರು. ಹಿಂಸೆ ಕೊಟ್ಟ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ಪುನೀತ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.