
ಚಿಕ್ಕಮಗಳೂರು: 2025–26ನೇ ಸಾಲಿಗೆ ಜಿಲ್ಲೆಯಲ್ಲಿ ₹10,296 ಕೋಟಿ ಸಾಲ ಒದಗಿಸುವ ಗುರಿಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ₹6,153 ಕೋಟಿ ಸಾಲ ವಿತರಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಕ ಎಚ್.ಎನ್.ಮಹೇಶ್ ತಿಳಿಸಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಿಕರ್ತರೊಂದಿಗೆ ಸಂವಾದ ನಡೆಸಿದರು.
ಆದ್ಯತಾ ವಲಯಕ್ಕೆ ₹7783.94 ಕೋಟಿ ಸಾಲ ಒದಗಿಸುವ ಗುರಿ ಹೊಂದಲಾಗಿದ್ದು, ಸದ್ಯ ₹4674.05 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಶೇ 61.12ರಷ್ಟು ಸಾಧನೆಯಾಗಿದೆ. ಕೃಷಿ, ಮಧ್ಯಮ–ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ, ಶೈಕ್ಷಣಿಕ ಸಾಲ, ಗೃಹ ಸಾಲ ಯೋಜನೆಗಳು ಒಳಗೊಂಡಿವೆ.
ಆದ್ಯತಾ ವಲಯದಲ್ಲಿ ಕೃಷಿಗೆ ಹೆಚ್ಚಿನ ಸಾಲ ನೀಡಲಾಗುತ್ತಿದೆ. ಬೆಳೆ ಸಾಲ ₹3964.71 ಕೋಟಿ, ಅಲ್ಪಾವಧಿ ಮತ್ತು ದೀರ್ಗಾವಧಿ ಸಾಲ ₹1558.58 ಕೋಟಿ, ಕೃಷಿ ಮೂಲಸೌಕರ್ಯ ಸಾಲ ₹54.71 ಕೋಟಿ ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಖಾಸಗಿ ಸಾಲ ಸೇರಿ ಆದ್ಯತೆಯಲ್ಲದ ವಲಯಕ್ಕೆ ₹ 2512.16 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿತ್ತು, ₹1479.25 ಕೋಟಿ ಒದಗಿಸಲಾಗಿದೆ. ಶೇ 58.88ರಷ್ಟು ಗುರಿ ಸಾಧನೆಯಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 29 ಬ್ಯಾಂಕ್ಗಳಿದ್ದು, ಅವುಗಳಿಗೆ ಸಂಬಂಧಿಸದ 304 ಶಾಖೆಗಳಿಂದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಲೀಡ್ ಬ್ಯಾಂಕ್ ಆಗಿ ಜಿಲ್ಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ಸಾಲ ಪಡೆದುಕೊಳ್ಳುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ವಾರ್ಷಿಕ ಸಾಲ ಯೋಜನೆಯ ಮೊತ್ತವೂ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ಎನ್.ಕೆ.ಗೋಪಿ ಇದ್ದರು.
ಸರ್ಫೇಸಿ ಬಗ್ಗೆ ತಿಳಿವಳಿಕೆ ಅಗತ್ಯ
ಸರ್ಫೇಸಿ ಕಾಯ್ದ ವ್ಯಾಪ್ತಿಯಲ್ಲಿ ವಾಣಿಜ್ಯ ಬೆಳೆಗಳು ಇವೆ. ಈ ಬಗ್ಗೆ ಗೊಂದಲಗಳಿಲ್ಲ. ಬೆಳೆಗಾರರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ಎಚ್.ಎನ್.ಮಹೇಶ್ ಹೇಳಿದರು. ಸರ್ಫೇಸಿ ಕಾಯ್ದೆ 2002ರಲ್ಲಿ ಜಾರಿಗೆ ಬಂದಿದೆ. ಸಾಲ ಪಡೆದವರು ಮರುಪಾವತಿ ಮಾಡದೆ ಸುಸ್ತಿದಾರರಾದರೆ ಅವರು ಅಡಮಾನ ಇಟ್ಟ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ಇದೆ. ಕೃಷಿ ಬೆಳೆಗಳು ಈ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಕಾಫಿ ವಾಣಿಜ್ಯ ಬೆಳೆ ಆಗಿರುವುದರಿಂದ ಈ ಕಾಯ್ದೆ ವ್ಯಾಪ್ತಿಗೆ ಬಂದಿದೆ ಎಂದರು. ಏಕಾಏಕಿ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶ ಇಲ್ಲ. ಸುಸ್ತಿದಾರರಿಗೆ ಮೊದಲ ನೋಟಿಸ್ ನೀಡಿ 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಗಲೂ ಸಾಲ ಮರುಪಾವತಿಯಾಗದಿದ್ದರೆ ಆಸ್ತಿ ವಶಕ್ಕೆ ಪಡೆಯುವುದಾಗಿ ನೋಟಿಸ್ ನೀಡಿ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆಸ್ತಿ ವಶಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದರು. ಇ–ಹರಾಜಿನ ಮೂಲಕ ಆಸ್ತಿ ಮಾರಾಟ ಮಾಡಿ ಹಣ ಮರುಪಾವತಿ ಮಾಡಿಕೊಳ್ಳಲಾಗುತ್ತದೆ. ಹರಾಜು ಪ್ರಕ್ರಿಯೆ ಆನ್ಲೈನ್ನಲ್ಲಿ ನಡೆಯುವುದರಿಂದ ಯಾವುದೇ ಪಿತೂರಿ ನಡೆಯುವುದಿಲ್ಲ. ಮಧ್ಯವರ್ತಿಗಳ ಹಸ್ತಕ್ಷೇಪಕ್ಕೂ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ಯಾಂಕ್ಗಳು ಒಟಿಎಸ್(ಒನ್ ಟೈಮ್ ಸೆಟಲ್ಮೆಂಟ್) ಮೂಲಕ ಸಾಲ ಮರುಪಾವತಿಗೆ ಅವಕಾಶ ನೀಡಿದ್ದವು. ಈಗ ಸಾಕಷ್ಟು ಬೆಳೆಗಾರರು ಸಾಲ ಮರುಪಾವತಿ ಮಾಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.