ಕಳಸ: ಜಾನಪದ ಕಲೆಗಳು ನಾಡಿನ ಕಲಾ ಶ್ರೀಮಂತಿಕೆ ಹಾಗೂ ಜೀವಂತ ಸಂಸ್ಕೃತಿಯ ಪ್ರತೀಕ. ಮಲೆನಾಡಿನ ಜಾನಪದ ಕಲೆಗಳು ಎಲ್ಲೆಡೆಯೂ ಪ್ರಚಾರಗೊಳ್ಳುವ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ರಾಜಲಕ್ಷ್ಮಿ ಬಿ. ಜೋಷಿ ಅಭಿಪ್ರಾಯಪಟ್ಟರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಕಳಸದ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಂಸಾಳೆ ನೃತ್ಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ ಸದಾನಂದ, ಮಮ್ತಾಜ್ ಬೇಗಂ ಮಾತನಾಡಿದರು.
ಕನ್ನಡ ಜಾನಪದ ಪರಿಷತ್ತಿನತಾಲ್ಲೂಕು ಘಟಕದ ಅಧ್ಯಕ್ಷೆ ಡಾ. ರಮ್ಯಾ ಎಚ್.ಬಿ. ಮಾತನಾಡಿ, ನಾಡಿನ ಶ್ರೀಮಂತ ಜಾನಪದ ಕಲೆಯಾದ ಕಂಸಾಳೆಯನ್ನು ಮಲೆನಾಡಿನ ಮಕ್ಕಳಿಗೆ ಪರಿಚಯಿಸುವುದುಕಾರ್ಯಗಾರದ ಉದ್ದೇಶವಾಗಿದೆ ಎಂದರು.
ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಮುಖ್ಯಸ್ಥ ಉಮೇಶ ತೆಂಕನಹಳ್ಳಿ ಮಾತನಾಡಿ, ‘ಜಾನಪದ ಕಲೆಗಳ ಕಲಿಕೆಗೆ ಕಲಾ ಪ್ರೀತಿ, ತುಡಿತ ಹಾಗೂ ಬದ್ಧತೆ ಮುಖ್ಯ. ವಿದ್ಯಾರ್ಥಿಗಳು ಕಲಾ ಪ್ರೀತಿ ಬೆಳೆಸಿಕೊಳ್ಳಬೇಕು ಹಾಗೂ ಜಾನಪದ ಕಲೆ ಕಲಿಯಲು ಆಸಕ್ತಿ ತೋರಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಮಾತನಾಡಿದರು. ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಶೇಖರ್ ಶೆಟ್ಟಿ, ತಾಲ್ಲೂಕು ಘಟಕದ ಕೋಶಾಧ್ಯಕ್ಷ ಕಿರಣ್ ಶೆಟ್ಟಿ, ಕಾಲೇಜು ಸಿ.ಡಿ.ಸಿ ಸದಸ್ಯ ಸುರೇಶಗೌಡ, ಪ್ರತಿಮಾ ಟ್ರಸ್ಟ್ನ ಎ.ಎಲ್. ನಾಗೇಶ್, ಬಿ. ಜಗದೀಶ್ ಚಂದ್ರ, ಪೋಷಕರ ವೇದಿಕೆ ಅಧ್ಯಕ್ಷ ಅಜಿತ್ ಪ್ರಸಾದ್, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಆದಿತ್ಯ ಅಡಿಗ, ವಿದ್ಯಾರ್ಥಿಗಳಾದ ಕವನ, ಕಾವ್ಯ, ಸುರಭಿ ಜೈನ್ ಇದ್ದರು.
ಪ್ರತಿಮಾ ಟ್ರಸ್ಟ್ ಕಲಾ ತಂಡ ನಡೆಸಿಕೊಟ್ಟ ಆಕರ್ಷಕ ಜಾನಪದ ಕಲಾ ಪ್ರದರ್ಶನ ಸಭಿಕರ ಮನಸೂರೆಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.