ಚಿಕ್ಕಮಗಳೂರು: ನ್ಯಾ.ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿ ನಡೆಯುವ ಜನಗಣತಿಗೆ ಗಣತಿದಾರರು ಬಂದಾಗ ಲಂಬಾಣಿ/ ಬಂಜಾರ ಎಂದು ನಮೂದಿಸಿಕೊಳ್ಳಬೇಕು ಎಂದು ಜಿಲ್ಲಾ ಬಂಜಾರ ಸಂಘದ ಕಾರ್ಯದರ್ಶಿ ಬಿ.ಟಿ.ಗಂಗಾಧರ ನಾಯಕ್ ತಿಳಿಸಿದರು.
ಪ.ಜಾತಿ ಕುಟುಂಬಗಳ ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿನೇತೃತ್ವದಲ್ಲಿ ಸಮೀಕ್ಷೆ ನಡೆಯುತ್ತದೆ. ಮೊದಲ ಹಂತದಲ್ಲಿ ಮೇ 5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ ನಡೆಯುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕ್ರಮ ಸಂಖ್ಯೆ 17.1 ರಿಂದ 17.7 ರವರೆಗೆ ಬಂಜಾರ ಜಾತಿಗೆ (ಲಂಬಾಣಿ) ಸಂಬಂಧಿಸಿದ ಲಂಬಾಡ, ಲಂಬಾಡಿ, ಸುಕಾಲ, ಸುಗಾ, ನಾಯ್ಕ, ನಾಯಕ್ ಎಂದು ಉಪನಾಮ/ ಜಾತಿಗಳಿವೆ. ಈ ಉಪನಾಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕಡ್ಡಾಯವಾಗಿ ಲಂಬಾಣಿ/ ಬಂಜಾರ ಎಂದು ನಮೂದಿಸಬೇಕು ಎಂದು ತಿಳಿಸಿದರು.
ಪಡೆದಿರುವ ಶಿಕ್ಷಣ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯ ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ ವೃತ್ತಿ, ಭೂಮಿ ಒಡೆತನ ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳ ರಾಜಕೀಯ ಪ್ರಾತಿನಿಧ್ಯತೆ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಹೇಳಿದರು.
ಎರಡನೇ ಹಂತದ ಸಮಿಕ್ಷೆ ಮೇ 19ರಿಂದ 21ರವರೆಗೆ, 3ನೇ ಹಂತದ ಸ್ವಯಂ ಘೋಷಣೆ (ಆನ್ಲೈನ್ ಮೂಲಕ) ಸಮೀಕ್ಷೆ ಮೇ 19ರಿಂದ 23ರವರೆಗೆ ನಡೆಯಲಿದೆ. ಸಂಘದ ಜಿಲ್ಲಾಧ್ಯಕ್ಷರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕ– ಯುವತಿಯರು, ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಕೈ ಜೋಡಿಸಿ ಬಂಜಾರ ಸಮುದಾಯದ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಲಕ್ಷ್ಮಣನಾಯ್ಕ್, ಉಪಾಧ್ಯಕ್ಷ ರಾಜಾ ನಾಯ್ಕ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.