ಚಿಕ್ಕಮಗಳೂರು: ಭದ್ರಾ ಜಲಾಶಯದಲ್ಲಿ ಜೂನ್, ಜುಲೈನಲ್ಲಿ ಮೀನುಗಾರಿಕೆ ನಿಷೇಧವಿದ್ದರೂ, ಉಲಂಘಿಸಿ ಎನ್.ಆರ್.ಪುರ ಭಾಗದಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ ಎಂದು ವೈಲ್ಡ್ ಕ್ಯಾಟ್–‘ಸಿ’ಯವರು ದೂಷಿಸಿದ್ದಾರೆ.
ಮೀನುಗಾರಿಕೆ ಇಲಾಖೆಯು ಈ ಜಲಾಶಯದಲ್ಲಿ ಆಗಸ್ಟ್ನಿಂದ ಮೇವರೆಗೆ (10 ತಿಂಗಳು) ಮಾತ್ರ ಪರವಾನಗಿ ನೀಡಿದೆ. ಒಂದು ಪರವಾನಗಿಯಲ್ಲಿ ಇಬ್ಬರು ಮೀನುಗಾರಿಕೆ ನಡೆಸಬಹುದು. ಇಲಾಖೆಯ ಷರತ್ತು ಗಾಳಿಗೆ ತೂರಿ ಜೂನ್ ಮತ್ತು ಜುಲೈನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಎನ್.ಆರ್.ಪುರ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲಾಖೆಯು ಭದ್ರಾ ಜಲಾಶಯದ ಇಡೀ 11,250 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಪರವಾನಗಿ ನೀಡಿದೆ. ಭದ್ರಾ ಅಭಯಾರಣ್ಯ ವ್ಯಾಪ್ತಿಯ ಸುಮಾರು 1,770 ಹೆಕ್ಟೇರ್ನಲ್ಲೂ ಮೀನುಗಾರಿಕೆ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಈ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕಲು ಭದ್ರಾ ಅಭಯಾರಣ್ಯದ ಅಧಿಕಾರಿಗಳಾಗಲಿ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾಗಲಿ ಮುಂದಾಗಿಲ್ಲ ಎಂದು ದೂರಿದ್ದಾರೆ.
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಶೇ 90 ಮೀನುಗಳು ಮೊಟ್ಟೆ ಇಡುವ ಹಂತದಲ್ಲಿವೆ. ನಿಷೇಧಿತ ಸಮಯದಲ್ಲಿ ಮೀನುಗಾರಿಕೆ ಮಾಡುತ್ತಿರುವುದು ಸರಿಯಲ್ಲ. ಇದು ಪಶ್ಚಿಮಘಟ್ಟದ ಮೀನುಗಳ ಸಂತಾನೋತ್ಪತಿ ಮತ್ತು ಅಭಯಾರಣ್ಯದ ಪ್ರಾಣಿಗಳಿಗೂ ಮಾರಕ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ವೈಲ್ಡ್ ಕ್ಯಾಟ್ ‘ಸಿ’ನ ಡಿ.ವಿ.ಗಿರೀಶ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.