ADVERTISEMENT

‘ಜೀವನ ಶೈಲಿ ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು’

ಕೊಪ್ಪದಲ್ಲಿ ಎಂ.ಐ.ಒ ನಿರ್ಮಿಸಿದ ಕ್ಯಾನ್ಸರ್ ಮಾಹಿತಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:09 IST
Last Updated 10 ಜನವರಿ 2026, 7:09 IST
ಕೊಪ್ಪದಲ್ಲಿ ಎಂ.ಐ.ಒ ವತಿಯಿಂದ ತೆರೆದ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಉದ್ಘಾಟಿಸಿದರು
ಕೊಪ್ಪದಲ್ಲಿ ಎಂ.ಐ.ಒ ವತಿಯಿಂದ ತೆರೆದ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಉದ್ಘಾಟಿಸಿದರು   

ಕೊಪ್ಪ: ‘ನಮ್ಮ ಜೀವನ ಶೈಲಿ ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು. ಹಿಂಜರಿಕೆಯಿಂದ ಕ್ಯಾನ್ಸರ್ ಕಾಯಿಲೆ ಮುಚ್ಚಿಡುವುದು ಜೀವಕ್ಕೆ ಕುತ್ತು ತರುತ್ತದೆ’ ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹೇಳಿದರು.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕೊಲಜಿ(ಎಂ.ಐ.ಓ), ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವತಿಯಿಂದ ಎಂ.ಎಸ್.ದ್ಯಾವೇಗೌಡ ವೃತ್ತದ ಸಮೀಪ ಬಾಳಗಡಿ ರಸ್ತೆಯಲ್ಲಿ ಆರಂಭಿಸಿದ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಕೊಲಜಿ ಸಂಸ್ಥೆಯು 40 ಸಾವಿರ ಜನರಿಗೆ ಚಿಕಿತ್ಸೆ ನೀಡಿದೆ’ ಎಂದರು.

ಶೃಂಗೇರಿ ಕ್ಷೇತ್ರದಲ್ಲಿ ಕಾಯಿಲೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿಲ್ಲ. ಈ ಭಾಗದಲ್ಲಿ ಶೇ 88 ಬಡವರು, ಕೂಲಿ ಕಾರ್ಮಿಕರು ಇದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿ, ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಅವಶ್ಯಕತೆ ಇರುವವರಿಗೆ ಮಾಹಿತಿ ನೀಡಬೇಕು. ಕೇವಲ ಶ್ರೀಮಂತರಿಗೆ ಮಾತ್ರವಲ್ಲ ಬಡವರು, ಕೂಲಿ ಕಾರ್ಮಿಕರಿಗೆ ಚಿಕಿತ್ಸೆ ಸಿಗಬೇಕು. ಅಮ್ಮ ಫೌಂಡೇಷನ್ ಆರೋಗ್ಯ ಕಾಳಜಿ ಕುರಿತ ಕಾರ್ಯಕ್ರಮಗಳಿಗೆ ಕೈಜೋಡಿಸಲಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ತೀರ್ಥಹಳ್ಳಿಯಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕೊಲಜಿ ಆಸ್ಪತ್ರೆಯ ಸರ್ಜಿಕಲ್ ಅಂಕೊಲಾಜಿಸ್ಟ್ ಡಾ.ದಿವ್ಯ ಜ್ಯೋತಿ, ‘ನಮ್ಮ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿದ್ದೇವೆ. ಕೆಲವೊಮ್ಮೆ ಕ್ಯಾನ್ಸರ್ ಉಲ್ಬಣಗೊಂಡ ನಂತರ ಮೂರನೇ, ನಾಲ್ಕನೇ ಹಂತದಲ್ಲಿ ರೋಗಿಗಳು ಬರುತ್ತಾರೆ. ಜನರಿಗೆ ಸರಿಯಾದ ಮಾಹಿತಿ ಸಿಗದೇ ಭಯ ಹಾಗೂ ತಪ್ಪು ಕಲ್ಪನೆ ಹೊಂದಿರುವುದೇ ಇದಕ್ಕೆ ಕಾರಣ ಎಂದು ಸಮೀಕ್ಷೆ ವೇಳೆ ಗೊತ್ತಾಗಿದೆ. ಕರಾವಳಿ ಭಾಗದಲ್ಲಿ 6 ಮಾಹಿತಿ ಕೇಂದ್ರ, ಈ ಭಾಗದಲ್ಲಿ 4 ಮಾಹಿತಿ ಕೇಂದ್ರ ಆರಂಭಿಸಿದ್ದೇವೆ. ಇದರಿಂದ ಜನರಿಗೆ ಅನುಕೂಲವಾಗಲಿದೆ’ ಎಂದರು.

ಶಿವಮೊಗ್ಗದ ಕ್ಯಾನ್ಸರ್ ಆಂದೋಲನ ಸಮಿತಿ ಮುಖ್ಯ ಸಂಯೋಜಕ ಅ.ನಾ.ವಿಜೇಂದ್ರ ರಾವ್ ಮಾತನಾಡಿ, ಅಮ್ಮ ಫೌಂಡೇಷನ್ ಸಹಯೋಗದಲ್ಲಿ ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ಈ ಭಾಗದ ಮನೆ ಮನೆಗೆ ತಲುಪಿಸಲಾಗುವುದು. ಶಿವಮೊಗ್ಗ ಭಾಗದ ಪ್ರೌಢಶಾಲೆ, ಕಾಲೇಜುಗಳಲ್ಲಿ ಸುಮಾರು 70 ಕಾರ್ಯಕ್ರಮ ಮಾಡಿದ್ದೇವೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಭಾಗದಲ್ಲಿ ಜಾಗೃತಿ ಆಂದೋಲನ ಮಾಡುತ್ತಿದ್ದೇವೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ನಾವು ಕೂಡ ಕೈ ಜೋಡಿಸುತ್ತೇವೆ ಎಂದರು.

ಕರ್ನಾಟಕ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ಅರವಿಂದ ಸೋಮಯಾಜಿ ಮಾತನಾಡಿ, ಈ ಭಾಗದಲ್ಲಿ ಬಡವರು ಹೆಚ್ಚು ಇದ್ದಾರೆ. ತೀರ್ಥಹಳ್ಳಿಯಲ್ಲಿರುವ ಆಸ್ಪತ್ರೆಗೆ ಹೋಗಿ ಬರಲು ಅವರಿಗೆ ಕನಿಷ್ಠ ಬಸ್ ಟಿಕೆಟ್ ದರದ ಮೊತ್ತದಷ್ಟಾದರೂ ರಿಯಾಯಿತಿ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಕೊಪ್ಪದ ಕ್ಯಾನ್ಸರ್ ಮಾಹಿತಿ ಕೇಂದ್ರದ ರಶ್ಮಿ, ಕ್ಯಾನ್ಸರ್ ಜಾಗೃತಿ ಮೂಡಿಸುವ ಕಾರ್ಯಕ್ರಮದ ಮುಂದಾಳು ಶಿಕ್ಷಕಿ ಗಂಗಾ ಶುಭಾಷ್, ಮುಖಂಡ ಕುಂಚುರು ವಾಸಪ್ಪ, ತೀರ್ಥಹಳ್ಳಿ ಎಂ.ಐ.ಒ ಆಸ್ಪತ್ರೆಯ ವೈದ್ಯರು ಇದ್ದರು.

ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಕಾಯಿಲೆ ಗುಣಪಡಿಸಬಹುದು

‘ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಹಿಂದೆ ಕ್ಯಾನ್ಸರ್ ಪ್ರಕರಣ ಇರಲಿಲ್ಲ. ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಮಂದಿ ಕ್ಯಾನ್ಸರ್ ರೋಗಿಗಳು ಬರುತ್ತಿದ್ದಾರೆ. ಬಾಯಿ ಎದೆ ಭಾಗದ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಶಿಸ್ತಿನ ಜೀವನ ಶೈಲಿ ಅಳವಡಿಸಿಕೊಂಡರೆ ಕಾಯಿಲೆ ತಡೆಗಟ್ಟಬಹುದು. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಕಾಯಿಲೆ ಗುಣಪಡಿಸಬಹುದು. ತೀರ್ಥಹಳ್ಳಿಯಲ್ಲಿ ಆಸ್ಪತ್ರೆ ಆಗಿರುವುದು ಅನುಕೂಲವಾಗಿದೆ’ ಎಂದು ದಂತ ವೈದ್ಯೆ ಡಾ.ಗಾನವಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.