ಕೊಟ್ಟಿಗೆಹಾರ: ಬಣಕಲ್, ಫಲ್ಗುಣಿ, ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳು ಸಂಖ್ಯೆ ಹೆಚ್ಚುತ್ತಿದ್ದು, ವಾಹನ ಸವಾರರಿಗೆ ತಲೆನೋವಾಗಿದೆ.
ಜಾನುವಾರಿನ ಬಗ್ಗೆ ಮಾಲೀಕರು ನಿಗಾ ವಹಿಸದೇ ಇರುವುದರಿಂದ ಅವುಗಳು ಮೇಯಲು ರಸ್ತೆ ಬದಿಗೆ ಬರುತ್ತಿವೆ. ಅವು ಹಗಲು ರಾತ್ರಿಯೆನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡು ಬಿಡುತ್ತಿದ್ದು, ಸಂಚಾರಕ್ಕೆ ಸಂಚಕಾರ ತರುತ್ತಿವೆ ಎಂಬ ದೂರು ಸ್ಥಳೀಯರಿಂದ ವ್ಯಕ್ತವಾಗಿದೆ.
ದನಗಳನ್ನು ರಸ್ತೆಗೆ ಬಿಡಬೇಡಿ, ಬಿಟ್ಟರೆ ಅಂತಹ ದನಗಳನ್ನು ಗೋಶಾಲೆಗೆ ಬಿಡಲಾಗುವುದು ಎಂದುಹಲವು ಬಾರಿ ದನಗಳ ವಾರಸುದಾರರಿಗೆ ಆಯಾ ಭಾಗದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚರಿಸಿದ್ದರೂ ಮಾಲೀಕರು ಮಾತ್ರ ಎಚ್ಚೆತ್ತುಕೊಂಡಿಲ್ಲ. ನಿತ್ಯ ರಸ್ತೆ ಅಪಘಾತಕ್ಕೆ ಜಾನುವಾರು ಬಲಿಯಾಗುತ್ತಿವೆ. ಬಣಕಲ್, ಚಕ್ಕಮಕ್ಕಿ ಬಗ್ಗಸಗೋಡು ಭಾಗದಲ್ಲಿ 50ಕ್ಕೂ ಹೆಚ್ಚು ದನಗಳು ಈವರೆಗೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿವೆ.
ರಸ್ತೆಯಲ್ಲಿ ಅಡ್ಡಾದಿಡ್ಡಿ ಗುಂಪುಗುಂಪಾಗಿ ದನಗಳು ಹಗಲು ಹೊತ್ತಿನಲ್ಲಿ ಇರುವುದರಿಂದ ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ರಾತ್ರಿ ಹೊತ್ತಿನಲ್ಲಿ ಜಾನುವಾರು ಹೆದ್ದಾರಿಯಲ್ಲಿ ಮಲಗುವುದರಿಂದ ಸವಾರರಿಗೆ ಕಾಣಿಸದೇ ಅವಘಡ ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.