
ಚಿಕ್ಕಮಗಳೂರು: ಜಿಲ್ಲೆಯ ಹೈನುಗಾರಿಕೆ ಉತ್ತೇಜನಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂಬ ಕೂಗು ಹಲವು ವರ್ಷಗಳಿಂದ ಇದೆ. ಬಜೆಟ್ನಲ್ಲಿ ಘೋಷಣೆಯಾಗಲಿದೆ ಎಂದು ಪ್ರತಿವರ್ಷ ನಿರೀಕ್ಷೆ ಮಾಡಿ ರೈತರು ನಿರಾಶರಾಗುತ್ತಿದ್ದಾರೆ. ಆದರೆ, ಸದ್ಯಕ್ಕೆ ಈ ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ವರ್ಷದಿಂದ ಎನ್ಡಿಸಿಬಿ ವರದಿಗಾಗಿ ಸರ್ಕಾರ ಕಾಯುತ್ತಿದೆ.
ಕರ್ನಾಟಕ ಹಾಲು ಮಹಾ ಮಂಡಲದ(ಕೆಎಂಎಫ್) ಅಡಿಯಲ್ಲಿ 16 ಒಕ್ಕೂಟಗಳಿವೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಸೇರಿ ಮೂರು ಜಿಲ್ಲೆಗಳನ್ನು ಒಳಗೊಂಡು ಹಾಸನ ಹಾಲು ಒಕ್ಕೂಟ ಇದೆ. 1977ರಲ್ಲಿ ಆರಂಭವಾದ ಈ ಒಕ್ಕೂಟವು ದಿನನಿತ್ಯ 15 ಲಕ್ಷ ಲೀಟರ್ನಷ್ಟು ಹಾಲು ಸಂಗ್ರಹ ಮಾಡಲಾಗುತ್ತಿದೆ. ಹಾಸನ ಒಕ್ಕೂಟದಿಂದ ಬೇರ್ಪಡಿಸಿ ಜಿಲ್ಲೆಗೆ ಹೊಂದಿಕೊಂಡಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕನ್ನು ಸೇರಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಬೇಕು ಎಂಬುದು ಜಿಲ್ಲೆಯ ರೈತರ ಬೇಡಿಕೆ. 2025ರ ಜನವರಿಯಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಿಗೂ ಜಿಲ್ಲೆಯ ಜನಪ್ರತಿನಿಧಿಗಳು ಮನವಿ ಮಾಡಿದ್ದರು.
‘ಗ್ರಾಮೀಣ ಮಟ್ಟದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಲ್ಲದೆ ತೊಂದರೆಯಾಗಿದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು. ಇದರಿಂದ ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ಅನುಕೂಲ ಆಗಲಿದೆ. ಕಡೂರು, ಚಿಕ್ಕಮಗಳೂರು ಹಾಗೂ ಅರಸೀಕೆರೆ ಒಳಗೊಂಡು ಪ್ರತ್ಯೇಕ ಒಕ್ಕೂಟ ರಚನೆಗೆ ಅವಕಾಶ ಇದೆ. ಇದನ್ನು ಪರಿಗಣಿಸಬೇಕು’ ಎಂದು ಮನವಿ ಮಾಡಿದ್ದರು.
ಆದರೆ, ಜಿಲ್ಲೆಯಲ್ಲಿ ಪ್ರತಿನಿತ್ಯ 1.50 ಲಕ್ಷ ಲೀಟರ್ ಮಾತ್ರ ಹಾಲು ಸಂಗ್ರಹವಾಗುತ್ತಿದೆ. ಅದು ಕೂಡ ಚಿಕ್ಕಮಗಳೂರು, ಕಡೂರು, ಅಜ್ಜಂಪುರ, ತರೀಕೆರೆ ತಾಲ್ಲೂಕಿನ ಬಯಲು ಸೀಮೆಯ ಭಾಗದಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಹಾಲು ಉತ್ಪಾದನೆ ಕಡಿಮೆ ಇದೆ. ಸ್ಥಳೀಯ ಮಲೆನಾಡು ಗಿಡ್ಡ ತಳಿಯ ಹಸುಗಳ ಸಾಕಾಣಿಕೆ ಹೆಚ್ಚಾಗಿದ್ದು, ಜರ್ಸಿ ಹಸುಗಳನ್ನು ಸಾಕಾಣಿಕೆ ಮಾಡುವುದು ವಿರಳ. ಅಲ್ಲದೇ ಮಲೆನಾಡಿನಿಂದ ನಿತ್ಯ ಹಾಲು ಸಂಗ್ರಹ, ಸಾಗಣೆ ಬಗ್ಗೆ ಕೆಎಂಎಫ್ ಆಲೋಚನೆ ನಡೆಸಿದೆ.
ಆದರೂ, ಬೇಡಿಕೆಯ ಕೂಗು ಹೆಚ್ಚಾಗಿರುವುದರಿಂದ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ(ಎನ್ಡಿಡಿಬಿ) ಅಭಿಪ್ರಾಯವನ್ನು ಕೆಎಂಎಫ್ ಕೇಳಿದೆ. ಎನ್ಡಿಡಿಬಿ ಕಾರ್ಯಸಾಧ್ಯತಾ ವರದಿ ಸಲ್ಲಿಸಿದ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಹಕಾರ ಇಲಾಖೆ ಸ್ಪಷ್ಟಪಡಿಸಿದೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ವಿಧಾನಸಭೆಯಲ್ಲಿ ಈ ಸಂಬಂಧ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸಹಕಾರ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎನ್ಡಿಡಿಬಿ ಪ್ರಾದೇಶಿಕ ನಿರ್ದೇಶಕರಿಗೆ 2025ರ ಮಾರ್ಚ್ 4ರಂದು ಕೆಎಂಎಫ್ ಪತ್ರ ಬರೆದು ಕಾರ್ಯಸಾಧ್ಯತೆ ಪರಿಶೀಲಿಸಿ ವರದಿ ನೀಡಲು ಕೋರಿದೆ. ವರದಿ ನಿರೀಕ್ಷೆಯಲ್ಲಿ ಸರ್ಕಾರ ಇದೆ’ ಎಂದು ತಿಳಿಸಿದ್ದಾರೆ.
11 ತಿಂಗಳ ಹಿಂದೆಯೇ ಕೆಎಂಎಫ್ ಪತ್ರ ಬರೆದಿದ್ದು, ಈವರೆಗೆ ಎನ್ಡಿಡಿಬಿ ಅಧಿಕಾರಿಗಳು ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಸಿದ ಬಳಿಕ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಕಾರ್ಯಸಾಧುವೋ, ಇಲ್ಲವೋ ಎಂಬುದು ಗೊತ್ತಾಗಲಿದೆ.
ಹಾಸನ ಒಕ್ಕೂಟ ವಿರೋಧ
ಚಿಕ್ಕಮಗಳೂರು ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಹಾಸನ ಹಾಲು ಒಕ್ಕೂಟ(ಹಮೂಲ್) ವಿರೋಧ ವ್ಯಕ್ತಪಡಿಸಿದೆ. ಪ್ರತ್ಯೇಕ ಒಕ್ಕೂಟ ಪ್ರಸ್ತಾವನೆಯನ್ನು ಕೆಎಂಎಫ್ ಹಾಸನ ಒಕ್ಕೂಟಕ್ಕೆ ಕಳುಹಿಸಿದ್ದು 2024ರ ಡಿಸೆಂಬರ್ 23ರಂದು ನಡೆದಿರುವ ಹಮೂಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಹಮೂಲ್ನಿಂದ ಚಿಕ್ಕಮಗಳೂರು ಜಿಲ್ಲೆ ಮತ್ತು ಅರಸೀಕೆರೆ ತಾಲ್ಲೂಕು ಬೇರ್ಪಡಿಸಲು ವಿರೋಧ ವ್ಯಕ್ತಪಡಿಸಲಾಗಿದೆ. ಸದ್ಯ ಇರುವಂತೆಯೇ ಚಿಕ್ಕಮಗಳೂರು ಜಿಲ್ಲೆಯನ್ನು ಹಾಸನ ಒಕ್ಕೂಟದಲ್ಲೇ ಮುಂದುವರಿಸಿ ಯಥಾಸ್ಥಿತಿ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.