ಚಿಕ್ಕಮಗಳೂರು: ‘ಗಾಂಧೀಜಿ ಮತ್ತು ಅಂಬೇಡ್ಕರ್ ಆರ್ಥಿಕ ನೀತಿ, ವಿಚಾರಧಾರೆ ಕಡೆಗೆ ಮುಖ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಡಳಿತ ಸೂತ್ರ ಹಿಡಿದಿರುವವರಿಗೆ ಸೂಕ್ಷ್ಮ ಭಾಷೆಯಲ್ಲಿ ಎಚ್ಚರಿಕೆ ನೀಡಲು ಉಪವಾಸ ಮಾಡಿದ್ದೇವೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ನಗರದ ಶಂಕರಪುರದ ದಲಿತ ಮಹಿಳೆ ಸಾವಿತ್ರಮ್ಮ ಅವರ ಮನೆಯಲ್ಲಿ ಶುಕ್ರವಾರ ಸಮಾನ ಮನಸ್ಕರೊಂದಿಗೆ ಉಪವಾಸ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಪ್ಪು ಆರ್ಥಿಕ ನೀತಿಯ ಪರಿಣಾಮವಾಗಿ ಬಡವರು ಉಪವಾಸ ಬೀಳುವಂತಾಗಿದೆ, ‘ಪಾಪ ಪ್ರಜ್ಞೆ’ ಮತ್ತು ‘ಪ್ರಾಯಶ್ಚಿತ್ತಾರ್ಥವಾಗಿ’ ಶುಕ್ರವಾರ ಉಪವಾಸ ಮಾಡಿದ್ದೇವೆ. ಲಾಕ್ಡೌನ್ನಿಂದ ಉಂಟಾಗಿರುವ ಅಡ್ಡಪರಿಣಾಮಗಳನ್ನು ಆಡಳಿತ ಸೂತ್ರ ಹಿಡಿದಿರುವವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಕೊರೊನಾ ತೆಡೆಗೆ ರಚನಾತ್ಮಕ (ಜನತಾ ಕರ್ಪ್ಯೂ, ಲಾಕ್ಡೌನ್, ಸೀಲ್ಡೌನ್) ವಿಚಾರಗಳಿಗೆ ಬೆಂಬಲ ಇದೆ. ಆದರೆ, ಭಾವನಾತ್ಮಕ (ಜಾಗಟೆ ಬಾರಿಸು, ದೀಪ ಹಚ್ಚುವುದು) ವಿಚಾರಗಳಿಗೆ ಬೆಂಬಲ ಇಲ್ಲ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.