ADVERTISEMENT

ಚಿಕ್ಕಮಗಳೂರು | ಮತ್ತೆ ಐವರಿಗೆ ಕೋವಿಡ್‌ ದೃಢ, ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

ಒಂದೇ ಕುಟುಂಬದ ಎಂಟು ಮಂದಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 22 ಮೇ 2020, 13:54 IST
Last Updated 22 ಮೇ 2020, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಮುಂಬೈನಿದ್ದ ಎನ್‌.ಆರ್‌.ಪುರಕ್ಕೆ ವಾಪಸಾಗಿ ಕೊಪ್ಪದ ಹರಂದೂರಿನ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಐವರಿಗೆ ಶುಕ್ರವಾರ ಕೋವಿಡ್‌–19 ದೃಢಪಟ್ಟಿದೆ. ಕಾಫಿನಾಡಿನಲ್ಲಿ ಈವರೆಗೆ 10 ಮಂದಿಗೆ ಸೋಂಕು ಪತ್ತೆಯಾಗಿದೆ.

ಏಳು ವರ್ಷದ ಬಾಲಕ (ಪಿ–1625), 14 ವರ್ಷದ ಬಾಲಕಿ (ಪಿ–1629), 48 ವರ್ಷದ ಮಹಿಳೆ (ಪಿ–1628), 49 ವರ್ಷದ ಪುರುಷ (ಪಿ–1626), ಮತ್ತೊಬ್ಬ 46 ವರ್ಷದ ಪುರುಷಗೆ (ಪಿ–1627) ಪತ್ತೆಯಾಗಿದೆ. ಇವೆರಲ್ಲರೂ ಎನ್‌.ಆರ್‌.ಪುರ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗದ್ದೆ ಗ್ರಾಮದವರು.

‘ಮುಂಬೈನಿಂದ ಎನ್‌.ಆರ್‌.ಪುರ ತಾಲ್ಲೂಕಿಗೆ ಒಂದೇ ಕುಟುಂಬದ ಒಂಬತ್ತು ಮಂದಿ ಬಂದಿದ್ದರು. ಮೂವರಿಗೆ (ಇಬ್ಬರು ಬಾಲಕರು, ಒಬ್ಬರು ಯುವತಿ) ಸೋಂಕು ತಗುಲಿರುವುದು ಇದೇ 19ರಂದು ದೃಢಪಟ್ಟಿತ್ತು. ಶನಿವಾರ ಐವರಿಗೆ ಪತ್ತೆಯಾಗಿದೆ, ಇನ್ನು ಒಬ್ಬರ ಪರೀಕ್ಷಾ ವರದಿ ಬರಬೇಕಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

ADVERTISEMENT

‘ಸೋಂಕು ಪತ್ತೆಯಾಗಿರುವವರನ್ನು ಜಿಲ್ಲಾ ಕೇಂದ್ರದಲ್ಲಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಸೋಂಕು ಪತ್ತೆಯಾಗಿರುವ 10 ಮಂದಿ ಪೈಕಿ ಮಹಾರಾಷ್ಟ್ರದಿಂದ ಬಂದವರೇ ಎಂಟು ಮಂದಿ ಇದ್ದಾರೆ. ಹೊರರಾಜ್ಯಗಳಿಂದ ಜಿಲ್ಲೆಗೆ ಬಂದವರಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ ಜಾಸ್ತಿ ಇದೆ. ಕೆಲವೇ ದಿನಗಳ ಹಿಂದಷ್ಟೇ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಈಗ ಸೋಂಕಿನ ಭೀತಿ ಆವರಿಸಿದೆ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಕಟ್ಟೆಚ್ಚರವೇ ಸದ್ಯಕ್ಕೆ ‘ಮದ್ದಾ’ಗಿದೆ.

‘ಮನೆಯವರನ್ನು ನೋಡುವುದಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಹುಟ್ಟುಹಬ್ಬಕ್ಕೆ ಇತ್ಯಾದಿ ಸಣ್ಣಪುಟ್ಟದ್ದಕ್ಕೆಲ್ಲ ಊರಿಗೆ ಬರದಂತೆ ಕಡಿವಾಣ ಹಾಕಬೇಕು. ಜನ ಗುಂಪುಗೂಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಅನುರಾಧಾ ಆಸ್ಪತ್ರೆಯ ಡಾ.ಪ್ಯಾಟ್ರಿಕ್‌ ಹೇಳುತ್ತಾರೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ 317 ಮಂದಿ ಪ್ರವೇಶ
ಹೊರರಾಜ್ಯಗಳಿಂದ ಜಿಲ್ಲೆಗೆ ಇದೇ 5 ರಿಂದ 20ರವರೆಗೆ 533 ಮಂದಿ ಬಂದಿದ್ದಾರೆ. ಈ ಪೈಕಿ ಅತಿ ಹೆಚ್ಚು 317 ಮಂದಿ ಬಂದಿದ್ದಾರೆ.

ತಮಿಳುನಾಡು–80, ಆಂಧ್ರಪ್ರದೇಶ– 32, ಕೇರಳ– 31, ತೆಲಂಗಾಣ–25, ರಾಜಸ್ಥಾನ–16, ಗುಜರಾತ್‌–11, ದೆಹಲಿ– 8, ಗೋವಾ–5, ಪುದುಚೇರಿ–4, ಮಧ್ಯಪ್ರದೇಶ, ಒಡಿಶಾ, ಪಂಜಾಬ್‌, ಉತ್ತರ ಪ್ರದೇಶದಿಂದ ತಲಾ ಒಬ್ಬರು ಬಂದಿದ್ದಾರೆ.

ಹೊರ ರಾಜ್ಯಗಳಿಂದ ಬಂದಿರುವ ಈ 533 ಮಂದಿಯನ್ನು ಜಿಲ್ಲೆಯ 14 ಕಡೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ.

ದುಬೈನಿಂದ ಇಬ್ಬರು ಪ್ರವೇಶ

ದುಬೈನಿಂದ ಜಿಲ್ಲೆಗೆ ಇಬ್ಬರು ಶನಿವಾರ ಬಂದಿದ್ದಾರೆ. ಇವರಿಬ್ಬರನ್ನು ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.