ಚಿಕ್ಕಮಗಳೂರು: ‘ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಏನೆಲ್ಲ ಸೌಕರ್ಯ ಇರಬೇಕು ಎಂಬ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ತರುತ್ತೇವೆ. ದ್ರವೀಕೃತ ಆಮ್ಲಜನಕ ಘಟಕ ಇರಬೇಕು, ಘಟಕಕ್ಕೆ ಒಮ್ಮೆ ಆಮ್ಲಜನಕ ತುಂಬಿಸಿದರೆ ಎರಡ್ಮೂರು ದಿನಗಳಿಗೆ ಸಾಕಾಗಬೇಕು ಮೊದಲಾದ ಅಂಶಗಳು ಅದರಲ್ಲಿವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಶೃಂಗೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಈ ಪರಿಹಾರಮಾರ್ಗಗಳು ಖಾಸಗಿ ವಲಯದಲ್ಲೂ ಲಭ್ಯವಾಗುವಂತೆ ಕ್ರಮ ವಹಿಸಿದ್ದೇವೆ’ ಎಂದು ಉತ್ತರಿಸಿದರು.
‘ಸಣ್ಣ ಆಮ್ಲಜನಕ ಸಿಲಿಂಡರ್ ಬಳಸಿಕೊಂಡು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ನರ್ಸಿಂಗ್ ಹೋಮ್ಗಳು ಇವೆ. ಸಣ್ಣ ಸಿಲಿಂಡರ್ ಬಳಸಿ ಚಿಕಿತ್ಸೆ ಮಾಡುವಾಗ ಮೂರು ಬಾರಿ ಬದಲಿಸಬೇಕಾಗುತ್ತದೆ. ಆಮ್ಲಜನಕ ಕೊರತೆಯಿಂದ ಒಂದರೆಡು ಪ್ರಕರಣಗಲ್ಲಿ ಸಮಸ್ಯೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ಆಮ್ಲಜನಕ ಇನ್ನು ಬಹಳಷ್ಟು ಅಗತ್ಯ ಇದೆ. ಪ್ರಕರಣಳ ಸಂಖ್ಯೆ ಇದೇ ಪ್ರಮಾಣದಲ್ಲಿ ಏರಿಕೆಯಾದರೆ ಮುಂದಿನ ತಿಂಗಳಿಗೆ 1200ರಿಂದ 1500 ಮೆಟ್ರಿಕ್ ಟನ್ನಷ್ಟು ಬೇಕಾಗುತ್ತದೆ. ಕೇಂದ್ರ ಸರ್ಕಾರವು ಈಗಿನ ಪರಿಸ್ಥಿತಿಗೆ 300 ಟನ್ ಹಂಚಿಕೆ ಮಾಡಿದೆ’ ಎಂದರು.
‘ಶಾರದಾಂಬೆ ಸನ್ನಿಧಿಯಲ್ಲಿ ಜರುಗುತ್ತಿರುವ ಯಾಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರಬೇಕಿತ್ತು. ಆದರೆ, ಕೋವಿಡ್ನಿಂದಾಗಿ ಬರಲು ಆಗಿಲ್ಲ. ಕೋರೊನಾದಿಂದ ಇಡೀ ರಾಜ್ಯ ಮುಕ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ನಾನೊಬ್ಬ ವೈದ್ಯ. ದೈವ ಶಕ್ತಿಯು ವೈಜ್ಞಾನಿಕ ಶಕ್ತಿಯನ್ನೂ ಮೀರಿದ್ದು. ಶಾರದಾ ಪೀಠದ ಮೇಲೆ ಬಹಳ ನಂಬಿಕೆ ಇಟ್ಟಿದ್ದೇನೆ’ ಎಂದರು.
‘ಬೆಂಗಳೂರಿನಲ್ಲಿ ಸಂಜೆ ಸಭೆ ನಡೆಯಲಿದೆ. ಮುಖ್ಯಕಾರ್ಯದರ್ಶಿ ಮೂಲಕ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.