ADVERTISEMENT

ತರುವೆಯಲ್ಲಿ ಒಂಟಿ ಸಲಗದ ಕಾಟ: ಅಪಾರ ಬೆಳೆ ಹಾನಿ, ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 10:41 IST
Last Updated 10 ಜುಲೈ 2020, 10:41 IST
ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ದಿವಾಕರ್ ಕಾರಂತ್ ಅವರ ಬಾಳೆ ತೋಟ ಆನೆದಾಳಿಯಿಂದ ಹಾನಿಯಾಗಿರುವುದು
ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ದಿವಾಕರ್ ಕಾರಂತ್ ಅವರ ಬಾಳೆ ತೋಟ ಆನೆದಾಳಿಯಿಂದ ಹಾನಿಯಾಗಿರುವುದು   

ಕೊಟ್ಟಿಗೆಹಾರ: ಸಮೀಪದ ತರುವೆ ಗ್ರಾಮದಲ್ಲಿ ಎರಡು ದಿನಗಳಿಂದ ಒಂಟಿ ಸಲಗದ ಕಾಟದಿಂದ ಅಪಾರ ಬೆಳೆ ಹಾನಿ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬುಧವಾರ ರಾತ್ರಿಯಿಂದ ಒಂಟಿ ಸಲಗ ಪ್ರತಿವರ್ಷವೂ ದಾಳಿಯಿಡುತ್ತಿದ್ದು, ತರುವೆ ಗ್ರಾಮದ ಪಿ.ಕೆ. ದಿವಾಕರ ಕಾರಂತ್, ಪಿ.ಕೆ. ಸುಬ್ರಾಯ ಕಾರಂತ್, ಮನೋಹರ್, ಗಿರೀಶ್, ಪ್ರವೀಣ್, ಟಿ.ನರೇಂದ್ರ ಗೌಡ, ದೇವರಾಜ್ ಗೌಡ, ಟಿ.ಬಿ.ರಮೇಶ್ ಮತ್ತಿತರ ರೈತರ ಬೆಳೆಗಳನ್ನು ಕಾಡಾನೆ ತುಳಿದು ನಾಶ ಮಾಡಿದೆ.

‘ಎರಡು ವರ್ಷದಿಂದ ಕಾಡಾನೆಯಿಂದ ಹಾನಿ ಸಂಭವಿಸುತ್ತಲೇ ಇದೆ. ಕೃಷಿ ಬೆಳೆ, ಬಾಳೆತೋಟವನ್ನು ನಾಶ ಮಾಡುತ್ತಿದೆ. ಆದರೆ, ಈವರೆಗೂ ಯಾವುದೇ ಪರಿಹಾರ ನಮಗೆ ಸಿಕ್ಕಿಲ್ಲ’ ಎಂದು ದಿವಾಕರ್ ಕಾರಂತ್ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಾಡಾನೆ ಸ್ಥಳಾಂತರಕ್ಕೆ ಒತ್ತಾಯ: 'ಕಾಡಾನೆಗಳು ಕೃಷಿ ಮಾಡುವ ಸಮಯದಲ್ಲಿ ತರುವೆ ಗ್ರಾಮಕ್ಕೆ ದಾಳಿಯಿಡುತ್ತಿದ್ದು ರೈತರು ಕಷ್ಟಪಟ್ಟು ಬೆಳೆದ ಭತ್ತದ ಸಸಿ ಮಡಿ, ಕಾಫಿ ಗಿಡಗಳು, ಬಾಳೆ ಗಿಡಗಳನ್ನು ಎಳೆದು ಹಾಕಿ ತುಳಿದು ನಾಶ ಪಡಿಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯ ಪರಿಹಾರ ನೀಡುವುದಕ್ಕಿಂತ ಅವುಗಳನ್ನು ಕಾಡಿಗೆ ಸ್ಥಳಾಂತರಿಸಬೇಕು’ ಎಂದು ಗ್ರಾಮಸ್ಥ ಟಿ.ಎಂ.ನರೇಂದ್ರಗೌಡ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.