ADVERTISEMENT

ಪ್ರಗತಿಪರ ಹೆಸರಿನಲ್ಲಿ ಸಂಸ್ಕೃತಿ ನಾಶವಾಗಬಾರದು: ವೀರಸೋಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:51 IST
Last Updated 9 ಮೇ 2025, 15:51 IST
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ವೀರಭದ್ರೇಶ್ವರ ದೇವಾಲಯದ ಪ್ರವೇಶೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ಉಮೇಶ್ ಉದ್ಘಾಟಿಸಿದರು
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ವೀರಭದ್ರೇಶ್ವರ ದೇವಾಲಯದ ಪ್ರವೇಶೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ಉಮೇಶ್ ಉದ್ಘಾಟಿಸಿದರು   

ಚಿಕ್ಕಮಗಳೂರು: ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟತೆ, ಸಂಸ್ಕೃತಿ ನಾಶಗೊಳ್ಳಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

ತಾಲ್ಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಾಲಯದ ಪ್ರವೇಶೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನುಷ್ಯನಲ್ಲಿ ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದರೆ ಶ್ರೇಯಸ್ಸು ನಿಶ್ಚಿತ. ಆದರ್ಶ ಬದುಕಿಗೆ ಗುರು ಕಾರುಣ್ಯ ಧರ್ಮಶ್ರದ್ಧೆ ಅವಶ್ಯಕ. ಧರ್ಮದ ದಿಕ್ಸೂಚಿ ಬಾಳಿನ ಭಾಗ್ಯೋದಯಕ್ಕೆ ಅಡಿಪಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಧರ್ಮಶ್ರದ್ಧೆ ಸಾಮರಸ್ಯ ರಾಷ್ಟ್ರಾಭಿಮಾನ ಬೆಳೆಸುವ ಗುರಿ ಎಲ್ಲರದೂ ಆಗಬೇಕು. ರವಿಕಿರಣದಿಂದ ಪುಷ್ಪ ಅರಳುತ್ತದೆ. ಗುರು ಕರುಣ ಆತ್ಮವನ್ನು ಅರಳಿಸುತ್ತದೆ ಎಂದು ಹೇಳಿದರು. 

ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಸಕಲರ ಬಾಳಿಗೆ ಬೆಳಕು ತೋರುತ್ತವೆ. ಮುಗುಳವಳ್ಳಿ ಗ್ರಾಮದ ಸಕಲ ಸದ್ಭಕ್ತರ ಸಹಕಾರದಿಂದ ಭವ್ಯ ದಿವ್ಯ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಿಸಿರುವುದು ಅತ್ಯಂತ ಸಂತೋಷ ಉಂಟು ಮಾಡುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಭಕ್ತರಿಗೆ ಶ್ರೀವೀರಭದ್ರೇಶ್ವರ ಸ್ವಾಮಿ ಶುಭವನ್ನು ಅನುಗ್ರಹಿಸಲೆಂದು ಶುಭ ಹಾರೈಸಿದರು.

‘ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸಕಲರ ಬಾಳಿಗೆ ಬೆಳಕು ತೋರುತ್ತವೆ. ಮುಗುಳವಳ್ಳಿ ಗ್ರಾಮದ ಭಕ್ತರ ಸಹಕಾರದಿಂದ ವೀರಭದ್ರೇಶ್ವರ ದೇವಾಲಯ ನಿರ್ಮಿಸಿರುವುದು ಸಂತಸದ ವಿಷಯ. ದೇಗುಲ ನಿರ್ಮಾಣದ ಕೆಲಸ ಅತ್ಯಂತ ಶ್ರೇಷ್ಠವಾದ ಕೆಲಸ. ಶ್ರಮಿಸಿದ ಎಲ್ಲರಿಗೂ ವೀರಭದ್ರಸ್ವಾಮಿಯ ಅನುಗ್ರಹ ಸಿಗಲಿದೆ’ ಎಂದರು.

ಸಮಾರಂಭಕ್ಕೂ ಮುನ್ನ ಮೆರವಣಿಗೆ ಮೂಲಕ ರಂಭಾಪುರಿ ಸ್ವಾಮೀಜಿ ಅವರನ್ನು ಕರೆ ತರಲಾಯಿತು. ನಂತರ ಲೋಕಕಲ್ಯಾಣಾರ್ಥ ಸ್ವಾಮೀಜಿ ಅವರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ, ಬೇರುಗಂಡಿ ಮಠದ ರೇಣುಕಮಹಂತ ಶಿವಾಚಾರ್ಯ, ಫಲಹಾರಸ್ವಾಮಿ ಮಠದ ಮುರುಘೇಂದ್ರ ಶಿವಾಚಾರ್ಯ, ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಮುಗುಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ಉಮೇಶ್, ಮುಖಂಡರಾದ ಎಂ.ಪಿ.ಕುಮಾರಸ್ವಾಮಿ, ಗಾಯಿತ್ರಿ ಶಾಂತೇಗೌಡ, ವಿರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಬಿ.ಎ.ಶಿವಶಂಕರ್, ಎಂ.ಎಸ್.ನಿರಂಜನ್, ಬಿ.ಎಚ್.ಹರೀಶ್, ಎ.ಎನ್.ಮಹೇಶ್, ಪ್ರೇಮಾ ಮಂಜುನಾಥ್, ಪುಷ್ಪಾ ಸೋಮಶೇಖರ್, ಎಂ.ಎಂ.ಪರಮೇಶ್ವರಪ್ಪ, ಎಚ್.ಸಿ.ಕಲ್ಕರುಡಪ್ಪ ಭಾಗವಹಿಸಿದ್ದರು.

ಮುಗುಳವಳ್ಳಿಯಲ್ಲಿ ನಿರ್ಮಾಣವಾಗಿರುವ ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ವೀರಭದ್ರೇಶ್ವರಸ್ವಾಮಿ ವಿಗ್ರಹಕ್ಕೆ ಬಾಳೆಹೊನ್ನೂರು  ರಂಭಾಪುರಿ ಮಠದ ವೀರಸೋಮೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.