
ಮೂಡಿಗೆರೆ: ವಾರದಿಂದ ಆರಂಭವಾಗಿದ್ದ ದತ್ತ ಜಯಂತಿ ತಾಲ್ಲೂಕಿನಾದ್ಯಂತ ಗುರುವಾರ ದತ್ತ ಪಾದುಕೆ ದರ್ಶನದೊಂದಿಗೆ ಮುಕ್ತಾಯ ಕಂಡಿತು.
ಮುನ್ನಚ್ಚರಿಕೆ ಕ್ರಮವಾಗಿ ಹೆದ್ದಾರಿ ಇಕ್ಕೆಲದ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳನ್ನು ಬಂದ್ ಮಾಡಿಸಿದ್ದರಿಂದ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಭೂತನಕಾಡಿನವರೆಗೂ ಹೆದ್ದಾರಿ ಇಕ್ಕೆಲ ಸಂಪೂರ್ಣವಾಗಿ ಬಂದ್ ಆಗಿತ್ತು.
ನಸುಕಿನಿಂದಲೇ ದತ್ತಮಾಲಾಧಾರಿಗಳು ದತ್ತಪೀಠದತ್ತ ವಾಹನಗಳಲ್ಲಿ ತೆರಳುತ್ತಿದ್ದರು. ಈ ಬಾರಿ ಕರಾವಳಿ ಭಾಗದಿಂದ 137 ವಾಹನಗಳಲ್ಲಿ ದತ್ತ ಭಕ್ತರು ಬಂದಿದ್ದು, ಹೆದ್ದಾರಿ ಬದಿಯ ಅಂಗಡಿ ಮುಂಗಟ್ಟು ಬಂದ್ ಆಗಿದ್ದರಿಂದ ಊಟ, ತಿಂಡಿಗಾಗಿ ಪರದಾಡುವಂತಾಗಿತ್ತು. ತಾಲ್ಲೂಕಿನಾದ್ಯಂತ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಕಾವಲು ಹಾಕಲಾಗಿತ್ತು. ಪಟ್ಟಣದ ಕೆ.ಎಂ. ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದತ್ತ ಭಕ್ತರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಅನ್ನ ಸಂತರ್ಪಣೆ ನಡೆಸಲಾಯಿತು. ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ದತ್ತ ಪೀಠದಿಂದ ಮನೆಗೆ ತೆರಳುತ್ತಿದ್ದ ತೆರೆದ ವಾಹನದಲ್ಲಿದ್ದ ದತ್ತ ಭಕ್ತರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.