ನರಸಿಂಹರಾಜಪುರ: ತಾಲ್ಲೂಕಿನ ಭದ್ರಾ ಹಿನ್ನೀರಿನ ಮೀನುಗಳು ರುಚಿಕರವಾಗಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.
ಇಲ್ಲಿನ ಮೀನು ಮಾರುಕಟ್ಟೆಗೆ ಭದ್ರಾ ಹಿನ್ನೀರಿನಲ್ಲಿ ಸಿಗುವ ಕಾಟ್ಲ, ರಾಹೊ, ಮೃಘಾಲ, ಗೊಜಲೆ, ಕೊಲ್ಸ್, ಗಿರ್ಲ್, ಸುರಗಿ, ಪಟ್ಟೆಗಾರ, ಅವ್ಲು, ಗೌರಿ ಮೀನುಗಳು ಬರುತ್ತವೆ. ನಿತ್ಯ 10 ಟನ್ಗೂ ಅಧಿಕ ಮೀನು ಶಿಕಾರಿ ಇಲ್ಲಿ ನಡೆಯುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಕಡಿಮೆ ಹಿನ್ನೀರು ಹಾಗೂ ಮಣ್ಣು ಮಿಶ್ರಿತ ನೀರು ಹರಿದು ಬರುವುದರಿಂದ ಮೀನು ಶಿಕಾರಿ ಹೆಚ್ಚಾಗಿರುತ್ತದೆ. ನೀರು ಹೆಚ್ಚಳವಾದಾಗ ಮೀನು ಶಿಕಾರಿ ಕಡಿಮೆ ಇರುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.
ಪ್ರಸ್ತುತ ಮೀನು ಶಿಕಾರಿ ಕಡಿಮೆ ಇರುವುದರಿಂದ ಮೃಘಾಲ, ರಾಹು, ಗೌರಿ ಹೆಚ್ಚಾಗಿ ಲಭ್ಯವಾಗುತ್ತಿವೆ. ಬೆಳಿಗ್ಗೆ ಮತ್ತು ಸಂಜೆ ಮಾರುಕಟ್ಟೆಗೆ ಮೀನು ಪೂರೈಕೆಯಾಗುತ್ತದೆ. ಒಂದೊಂದು ಮೀನು 5 ಕೆ.ಜಿ.ಯಿಂದ 20 ಕೆ.ಜಿ.ವರೆಗೆ ತೂಗುತ್ತವೆ. ಗೋಜಲೆ ಮೀನಿಗೆ ಭಾರಿ ಬೇಡಿಕೆ ಇದೆ.
ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ, ಶೃಂಗೇರಿ ಹಾಗೂ ಇತರ ಭಾಗಗಳಿಂದ ಜನರು ಖರೀದಿಗೆ ಬರುತ್ತಾರೆ. ಮಳೆಗಾಲದಲ್ಲಿ ಮುಂಬೈ ಮಾರುಕಟ್ಟೆಗೂ ಪೂರೈಸಲಾಗುತ್ತದೆ. ಹೊಳೆಯ ಮೀನು ಕೆಜಿಗೆ ಸರಾಸರಿ ₹250 ಇದ್ದರೆ, ಕೆರೆ ಮೀನುಗಳಿಗೆ ₹180ರಿಂದ ₹200ವರೆಗೆ ಇರುತ್ತದೆ. ಮೀನು ಶಿಕಾರಿ ಮಾಡುವ ಗ್ರಾಮಗಳ ವ್ಯಾಪ್ತಿಯಲ್ಲಿ ಮಾರುಕಟ್ಟೆ ದರಕ್ಕಿಂತಲೂ ಬೆಲೆ ಕಡಿಮೆ ಇರುತ್ತದೆ.
ಮಾರುಕಟ್ಟೆಯಲ್ಲಿ ಸಮುದ್ರದ ಬೂತಾಯಿ, ಬಂಗುಡೆ, ಅಂಜಲ್, ಮಾಂಜಿ ಇತ್ಯಾದಿ ಮೀನು ಹಾಗೂ ಒಣ ಮೀನು ಲಭ್ಯ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.