ಕಡೂರು: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದ ಒಳಭಾಗದಲ್ಲಿ ಸ್ವಚ್ಛತೆ ಇದೆ. ಆದರೆ, ನಿಲ್ದಾಣದ ಎದುರು ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.
ಬಸ್ ನಿಲ್ದಾಣದ ಒಳಗಿರುವ ಹೋಟೆಲ್ನಿಂದ ಹೊರಬರುವ ತ್ಯಾಜ್ಯದ ನೀರು ಚರಂಡಿಗೆ ಹೋಗದೆ, ವಾಹನ ನಿಲುಗಡೆ ಪ್ರದೇಶದ ಸಮೀಪದಲ್ಲಿರುವ ಚೇಂಬರ್ನಿಂದ ಹೊರಗೆ ಹರಿದು ಸುತ್ತೆಲ್ಲ ಗಲೀಜಾಗಿದೆ. ಈ ನೀರಿನಲ್ಲಿ ಹೋಟೆಲ್ ತಿಂಡಿ ಚೂರು, ಅನ್ನವೂ ತೇಲುತ್ತಿರುತ್ತದೆ. ಜನರು ಅದನ್ನು ತುಳಿದುಕೊಂಡೇ ಹೋಗುವ ಅನಿವಾರ್ಯತೆಯಿದೆ.
ವಾಹನ ನಿಲ್ದಾಣದ ಹೊರಗೆ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಚಿಕ್ಕಮಗಳೂರು ಸೇರಿದಂತೆ ಬೇರೆ ಊರುಗಳಿಗೆ ಕೆಲಸಕ್ಕೆ ಹೋಗುವವರು ಇಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ವಾಹನ ನಿಲ್ಲಿಸಿ ಹೋಗುವಾಗ ಯಾರೂ ಕೇಳುವುದಿಲ್ಲ. ಆದರೆ, ವಾಪಸ್ ಬಂದು ವಾಹನ ತೆಗೆಯುವಾಗ ವ್ಯಕ್ತಿಗಳು ಬಂದು ಹಣ ಕೇಳುತ್ತಾರೆ.ಇವರು ಅಧಿಕೃತವಾಗಿ ವಾಹನ ನಿಲುಗಡೆ ಟೆಂಡರ್ ಪಡೆವರೋ ಅಲ್ಲವೋ ಎನ್ನುವುದು ತಿಳಿಯದೆ ಮಾತಿನ ಚಕಮಕಿ ಸಾಮಾನ್ಯವಾಗಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಅಪೂರ್ಣಗೊಂಡಿರುವ ಮಳಿಗೆಗಳಿವೆ. ಮುಖ್ಯರಸ್ತೆಗೆ ಮುಖಮಾಡಿರುವ ಈ ಮಳಿಗೆಗಳ ಹಿಂಭಾಗ ಬಸ್ ನಿಲ್ದಾಣದ ಪ್ರವೇಶದ್ವಾರದ ಕಡೆಗಿದೆ. ಈ ಮಳಿಗೆಗಳ ಹಿಂಭಾಗ ರಾತ್ರಿ ವೇಳೆ ಶೌಚಾಲಯವಾಗಿ ಬದಲಾಗಿದೆ. ಜನರು ಎಲೆ ಅಡಿಕೆ ತಿಂದು ಉಗುಳುವ, ಕಸ ಎಸೆಯುವ ಸ್ಥಳವೂ ಇದೇ ಆಗಿದೆ.
ಬಸ್ ನಿಲ್ದಾಣದ ಹೋಟೆಲ್ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪೈಪ್ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು-ಮಂಜುನಾಥ್, ಮುಖ್ಯಾಧಿಕಾರಿ ಕಡೂರು ಪುರಸಭೆ
ಬಸ್ ನಿಲ್ದಾಣದ ಹೊರಗೆ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆಯಾಗಬೇಕು. ನಿರ್ವಹಣೆ ಮಾಡುವ ಗುತ್ತಿಗೆದಾರರ ಮಾಹಿತಿಯನ್ನು ಜನರಿಗೆ ಕಾಣುವಂತೆ ಫಲಕದಲ್ಲಿ ಅಳವಡಿಸಬೇಕು-ಗಣೇಶ ಡಿ.ಎನ್ ಕಡೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.