ಚಿಕ್ಕಮಗಳೂರು: ನಗರದ ಎಂಟನೇ ವಾರ್ಡ್ನ ಕೆಲವು ರಸ್ತೆಗಳ ಬದಿ ಚರಂಡಿ ಇಲ್ಲ, ಹಲವು ರಸ್ತೆಗಳು ಹದಗೆಟ್ಟಿವೆ ವಾರ್ಡ್ನ ಆದರ್ಶ ನಗರದ ಎರಡನೇ ಅಡ್ಡರಸ್ತೆಯ ಕೆಳಭಾಗ ಪ್ರದೇಶವು ಯಗಚಿ ಹಳ್ಳದ ಸೆರಗಿನಲ್ಲಿದ್ದು ಕೊಳಚೆ, ಸೊಳ್ಳೆ ಕಾಟ, ದುರ್ನಾತ ಸಮಸ್ಯೆ ಕಾಡುತ್ತಿವೆ.
ಆದರ್ಶನಗರದ ಎರಡನೇ ಅಡ್ಡರಸ್ತೆಯ ಕೆಳಭಾಗ ಪ್ರದೇಶದಲ್ಲಿ ಒಳಚರಂಡಿ ಸಮಸ್ಯೆ ಕಾಡುತ್ತಿದೆ. ಆಳ ಗುಂಡಿ (ಮ್ಯಾನ್ ಹೋಲ್) ಗಲೀಜು ನೀರು ಉಕ್ಕಿ ರಸ್ತೆ ಮೇಲೆ ಹರಿಯುತ್ತಿದೆ.
ಕೆಎಸ್ಆರ್ಟಿಸಿ ಡಿಪೊದ ಚರಂಡಿಯ ನೀರು ಈ ಭಾಗದಲ್ಲಿ ಹಾದು ಹೋಗುತ್ತದೆ. ಈ ಪ್ರದೇಶವು ತಗ್ಗಿನಲ್ಲಿದ್ದು ಮಳೆ ರಭಸವಾಗಿ ಸುರಿದಾಗ ಚರಂಡಿ ನೀರು ಮನೆಯೊಳಕ್ಕೆ ಹೊರಳುತ್ತದೆ.
ಜಯನಗರದ ಮೂರನೇ ಅಡ್ಡರಸ್ತೆ (ಗ್ಯಾರೇಜ್ ಪಕ್ಕ) ಕೆಸರುಮಯವಾಗಿದೆ. ವಾರ್ಡ್ನ ಹಲವು ರಸ್ತೆಗಳು ಗುಂಡಿಮಯವಾಗಿವೆ. ಓಡಾಟ ತಾಪತ್ರಯವಾಗಿದೆ.
‘ರಸ್ತೆ ಹಾಳಾಗಿ ವರ್ಷವಾಗಿದೆ. ಈವರೆಗೆ ರಿಪೇರಿ ಮಾಡಿಲ್ಲ. ಗುಂಡಿ, ಕೆಸರಿನಲ್ಲಿ ಸಂಚಾರ ಸಂಕಷ್ಟವಾಗಿ ಪರಿಣಮಿಸಿದೆ’ ಎಂದು ಜಯನಗರದ ವಿದ್ಯಾರ್ಥಿನಿ ಆರ್.ಅಶ್ವಿನಿ ಅಳಲು ತೋಡಿಕೊಂಡರು.
ಜಯನಗರ, ಮಾರುತಿನಗರ, ಆದರ್ಶನಗರ, ಹೊಸಮನೆ, ಸುತ್ತಲಿನ ಭಾಗಗಳು ಈ ವಾರ್ಡ್ ವ್ಯಾಪ್ತಿಯಲ್ಲಿವೆ. ಜಯನಗರ ಭಾಗದಲ್ಲಿ (ಕೆ.ಎಂ ರಸ್ತೆ ಪಕ್ಕ) ಹಲವು ಗ್ಯಾರೇಜ್ಗಳು ಇವೆ. ರಿಪೇರಿಗೆ ತಂದಿರುವ, ಹಳೆಯ ವಾಹನಗಳು ಗ್ಯಾರೇಜ್ ಬದಿಯ ನಿವೇಶನಗಳಲ್ಲಿ ಇವೆ. ಕೆಲ ವಾಹನಗಳು ಅಲ್ಲಿಯೇ ತುಕ್ಕು ಹಿಡಿದು ಹಾಳಾಗಿವೆ. ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿವೆ.
ವಾರ್ಡ್ನ ಕೆಲವು ಕಡೆಗೆ ಕಸ ಸಂಗ್ರಹ ವಾಹನ ನಿಯಮಿತವಾಗಿ ಬರಲ್ಲ ಎಂಬ ದೂರುಗಳು ಇವೆ. ಹಲವು ನಿವೇಶನಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಉದ್ಯಾನಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದುಕೊಂಡಿದೆ. ಕೆಲವೆಡೆ ಬೇಲಿ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.