ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷದ್, ಬಜರಂಗದಳದ ವತಿಯಿಂದ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಆರಂಭದ ದಿನವಾದ ಗುರುವಾರ ಅನಸೂಯ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು.
ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಕಾಲ್ನಡಿಗೆ ಮೂಲಕ ಹೊರಟ ಸಂಕೀರ್ತನಾ ಯಾತ್ರೆ ಐ.ಜಿ. ರಸ್ತೆ, ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನ ಹಾದು ಕಾಮಧೇನು ಗಣಪತಿ ದೇವಾಲಯ ತಲುಪಿತು.
ದೇವಾಲಯದಲ್ಲಿ ಬೆಳಿಗ್ಗೆ ಅನಸೂಯ ದೇವಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಯಾತ್ರೆ ಆರಂಭವಾಗುತ್ತಿದ್ದಂತೆ ವಿವಿಧೆಡೆಗಳಿಂದ ಬಂದಿದ್ದ ನೂರಾರು ಭಕ್ತರು, ಹಿಂದೂಪರ ಸಂಘಟನೆ, ಭಜನಾ ಮಂಡಳಿ ಮಹಿಳಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನೂರಾರು ಮಹಿಳೆಯರು ಕೊರಳಿಗೆ ಕೇಸರಿ ಶಾಲು ಧರಿಸಿ, ಅನಸೂಯ ದೇವಿಯ ಚಿತ್ರಪಟ ಹಿಡಿದು ಸಾಗಿದರು. ಮತ್ತೊಂದೆಡೆ ಭಜನಾ ಮಂಡಳಿ ಮಹಿಳೆಯರು ಭಜನೆ ಪದಗಳನ್ನು ಹಾಡುತ್ತಾ, ದತ್ತಾತ್ರೇಯ ಸ್ವಾಮಿ ಸ್ಮರಣೆಯೊಂದಿಗೆ ಹೆಜ್ಜೆಹಾಕಿದರು. ಕೆಲವರು ಕೇಸರಿ ಭಾಗವತ ಧ್ವಜ ಹಿಡಿದು, ದತ್ತಾತ್ರೇಯ ಸ್ವಾಮಿ ಮೂರ್ತಿಯ ಅಡ್ಡೆಯನ್ನು ಹೊತ್ತು ಸಾಗಿದರು.
ಸಂಕೀರ್ತನಾ ಯಾತ್ರೆಯನ್ನು ರಸ್ತೆಯುದ್ದಕ್ಕೂ ನಿಂತು ಜನ ಕಣ್ತುಂಬಿಕೊಂಡರು. ಮೆರವಣಿಗೆ ಅಂಗವಾಗಿ ಹೋಟೆಲ್, ಅಂಗಡಿ–ಮುಂಗ್ಗಟ್ಟುಗಳನ್ನು ಮುಚ್ಚಲಾಗಿತ್ತು. ಬಳಿಕ ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದರು.
ಅಲ್ಲಿ ಅನಸೂಯದೇವಿ ಪೂಜೆ, ಗಣಪತಿಪೂಜೆ, ದುರ್ಗಾಹೋಮ, ಕಲಾಶಾಭಿಷೇಕ ಮಾಡಿದರು.
ಪೊಲೀಸರ ಬಿಗಿ ಬಂದೊಬಸ್ತಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಸರತಿ ಸಾಲಿನಲ್ಲಿ ದತ್ತಾತ್ರೇಯ ಸ್ವಾಮಿ ಪಾದುಕೆ ದರ್ಶನ ಪಡೆದರು.
ಸಂಕೀರ್ತನಾ ಯಾತ್ರೆ ಉದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಶುಕ್ರವಾರ ಶೋಭಾಯಾತ್ರೆ ನಡೆಯಲಿದ್ದು, ಶನಿವಾರ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ದತ್ತ ಪಾದುಕೆ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.