ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಸಮೀಪದ ಕಲ್ಲುಹೊಳೆ ಗ್ರಾಮದ ಹೊಲದಲ್ಲಿ ವಿದ್ಯುತ್ ಪ್ರವಹಿಸಿದ್ದ ಬೇಲಿಯ ತಂತಿ ತುಳಿದು ಗಂಡಾನೆ ಸಾವಿಗೀಡಾದ ಪ್ರಕರಣಕ್ಕೆ ಹುಲಿಯಪ್ಪ ಗೌಡ (47) ಎಂಬಾತನನ್ನು ಆರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.
‘ಹೊಲದಲ್ಲಿ ಬೇಲಿಯ ತಂತಿಗೆ ವಿದ್ಯುತ್ ಹರಿಸಿದ್ದರಿಂದ ಮೇವಿಗಾಗಿ ಅರಸಿ ಬಂದ ಆನೆ ತಂತಿ ತುಳಿದು ಮೃತಪಟ್ಟಿತ್ತು. ಆರೋಪಿ ತಲೆ ಮರೆಸಿಕೊಂಡಿದ್ದ, ಪತ್ತೆಗೆ ಬಲೆ ಬೀಸಿದ್ದೆವು. ಜಾಡು ಹಿಡಿದು ಹೊಸ ಸಿದ್ಧರಹಳ್ಳಿ ಬಳಿ ಆರೋಪಿ ಹಿಡಿದಿದ್ದೇವೆ. ಕೋರ್ಟ್ಗೆ ಹಾಜರುಪಡಿಸುತ್ತೇವೆ‘ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿವಿಧೆಡೆ ಹೊಲಗಳಲ್ಲಿ ಬೇಲಿಗೆ ತಂತಿ ಅಳವಡಿಸಿದ್ದನ್ನು ತೆರವುಗೊಳಿಸಲಾಗಿದೆ. ಮೆಸ್ಕಾಂ ತಂಡ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಿದ್ದೇವೆ’ ಎಂದೂ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ತನುಜ್ ಮತ್ತು ಸಿಬ್ಬಂದಿ ಕಾರ್ಯಚರಣೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.