ತರೀಕೆರೆ: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ತಾಲ್ಲೂಕು ಮಟ್ಟದ ಜಾನಪದ ಸಮ್ಮೇಳನವನ್ನು ಆ.31ರಂದು ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಸುರೇಶ್ ಹೇಳಿದರು.
ಬೆಟ್ಟತಾವರಕೆರೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿ ಜಾನಪದಕ್ಕಿದೆ. ಭಾರತೀಯ ಆಚಾರ- ವಿಚಾರ, ಉಡುಗೆ-ತೊಡುಗೆ, ಧರ್ಮ, ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಸಹಿಷ್ಣತೆ ಅರಿವನ್ನು ಮೂಡಿಸಬೇಕಾದರೆ ಶಾಲಾ ಕಾಲೇಜುಗಳಲ್ಲಿ ಜಾನಪದಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ಸಭೆ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಿ. ಕಲ್ಲೇಶಪ್ಪ, ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಸಮ್ಮೇಳನ, ಕಲೋತ್ಸವ ಮತ್ತು ತರಬೇತಿ ಶಿಬಿರ, ವಿಚಾರ ಸಂಕಿರಣ, ಗೀತ ಗಾಯನ ತರಬೇತಿ ನಡೆಸಿ ಸದಭಿರುಚಿ ಮೂಡಿಸಬೇಕಾಗಿದೆ ಎಂದರು.
ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್. ರಾಜಶೇಖರ್ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷರನ್ನಾಗಿ ಭಜನಾ ಕಲಾವಿದ ಬಿ.ವಿ. ಜಯಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಉಪಾಧ್ಯಕ್ಷ ಗೊಂಡೆದಳ್ಳಿ ತಿಪ್ಪೇಶ್, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ,ಕಲಾವಿದ ಚಿಕ್ಕಾನವಂಗಲ ಶಂಕರಪ್ಪ, ಮರಳುಸಿದ್ದಪ್ಪ, ತ್ಯಾಗದಬಾಗಿ ದೇವರಾಜ್, ಗ್ರಾಮ ಪಂಚಾಯತಿ ಸದಸ್ಯೆ ಸುಮಿತ್ರಮ್ಮ, ಜಯಣ್ಣ, ತಿಪ್ಪೇರುದ್ರಪ್ಪ, ತಿಪ್ಪೇಶಪ್ಪ, ಮಹಾಂತೇಶ ಪಿ., ದೇವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.