ಚಿಕ್ಕಮಗಳೂರು: ತಾಲ್ಲೂಕಿನ ಗಂಧರ್ವಗಿರಿ ಗ್ರಾಮದಲ್ಲಿ ಬಸವ (55) ಎಂಬಾತ ಸನಿಹದ ಮನೆಯ ಕೃಷ್ಣಪ್ಪಗೆ (55) ಕತ್ತಿಯಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಗಳವಾರ ಬೆಳಿಗ್ಗೆ ಕೃತ್ಯ ಎಸಗಿದ್ದಾನೆ. ಈ ಹಿಂದೆ ಇಬ್ಬರೂ ಹಲವು ಬಾರಿ ಜಗಳವಾಡಿದ್ದರು ಎಂದು ಮೂಲಗಳು ತಿಳಿಸಿವೆ.
‘ನಾಲ್ಕು ವರ್ಷ ಹಿಂದೆ ಕೃಷ್ಣಪ್ಪ ಬಸವನಿಂದ ₹ 3,000 ಸಾಲ ಪಡೆದಿದ್ದರಂತೆ. ಸಾಲದ ಹಣ ವಾಪಸ್ ಕೊಟ್ಟಿಲ್ಲ ಎಂದು ಹಲವು ಬಾರಿ ಜಗಳ ಮಾಡಿದ್ದನಂತೆ. ಮಂಗಳವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಕೃಷ್ಣಪ್ಪ ಪೂಜೆಗೆ ನೀರು ತರಲು ತೋಟಕ್ಕೆ ಹೋಗಿದ್ದಾಗ ಬಸವ ಅವರಿಗೆ ಕತ್ತಿಯಿಂದ ಕುತ್ತಿಗೆ ಇರಿದಿದ್ದಾನೆ. ಆತ ಜೋರಾಗಿ ಕೂಗಿಕೊಂಡಿದ್ದಾನೆ. ತಕ್ಷಣವೇ ಆತನ ಪತ್ನಿ ಪ್ರಮೀಳಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ನಡೆದುದನ್ನು ಕೃಷ್ಣಪ್ಪ ಪತ್ನಿಗೆ ಹೇಳಿದ್ದಾರೆ. ಆಸ್ಪತ್ರೆಗೆ ಒಯ್ಯುಲು ಅವರು ಯತ್ನಿಸಿದ್ದಾರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೃತ್ಯ ಎಸಗಿದ ಬಸವ ಮನೆಗೆ ತೆರಳಿದ್ದಾನೆ. ಮನೆಯಲ್ಲಿದ್ದ ಕಳೆ ನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.