ಕಡೂರು (ಚಿಕ್ಕಮಗಳೂರು): ‘ಸಿದ್ದರಾಮಯ್ಯ ಅವರನ್ನು ಜನತಾ ದಳಕ್ಕೆ ಕರೆತಂದು ತಪ್ಪು ಮಾಡಿದೆ. ಮೋಸ ಮಾಡುತ್ತಾನೆ ಎಂದು ರಾಮಕೃಷ್ಣ ಹೆಗಡೆ ಹೇಳಿದರೂ ನಾನು ಕೇಳಲಿಲ್ಲ. ಕೊನೆಗೂ ಮೋಸವಾಯಿತು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಕಡೂರಿನ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಅವರು ಸಹೋದರನ ಪುತ್ರ ಚೇತನ್ ಕೆಂಪರಾಜು ಅವರ ಮನೆಗೆ ಭೇಟಿ ನೀಡಿದ್ದ ಅವರು, ‘ಕೆ.ಎಂ.ಕೃಷ್ಣಮೂರ್ತಿ ಅವರನ್ನು ಮಂತ್ರಿ ಮಾಡಲು ಅವಕಾಶ ಇತ್ತು. ಅವರು ನನ್ನ ಒಡನಾಡಿ, ಅಭಿಮಾನಿ ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಲು ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡುವ ಅವಕಾಶ ಬಂದಾಗಲೂ ಅವಕಾಶ ನೀಡಲಿಲ್ಲ. ಮುಕುಡಪ್ಪ ಅವರನ್ನು ಮಾಡುತ್ತೇನೆ, ಇವರನ್ನು ಮಾಡಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಈ ಮಾತನ್ನು ಇಂದು ಹೇಳುತ್ತೇನೆ, ನಾಳೆಯೂ ಹೇಳುತ್ತೇನೆ, ನಾಡಿದ್ದೂ ಹೇಳುತ್ತೇನೆ. ಮಾತನಾಡಲು ಇನ್ನೂ ಬೇಕಾದಷ್ಟಿದೆ. ನನಗೀಗ 91 ವರ್ಷ ವಯಸ್ಸು, ಸುಳ್ಳು ಹೇಳಿದರೆ ದೇವರು ಒಳ್ಳೆಯದು ಮಾಡುವುದಿಲ್ಲ’ ಎಂದರು.
‘ನಾನು ಸಿದ್ದರಾಮಯ್ಯ ಅವರನ್ನು ಕರೆತಂದಾಗ ಹೆಗಡೆಗೂ ನನಗೂ ಗಲಾಟೆಯೇ ಆಯಿತು. ಇವನನ್ನು ನಂಬಬೇಡ, ನಿನಗೆ ಮೋಸ ಮಾಡುತ್ತಾನೆ. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿಗೆ ಅವಕಾಶ ನೀಡು ಎಂದು ಹೆಗಡೆ ಅವರು ತಮ್ಮ ಮನೆಯಲ್ಲೇ ಕೂರಿಸಿಕೊಂಡು ನನ್ನ ಕೈ ಹಿಡಿದು ಹೇಳಿದರು. ನಾನು ಕೇಳಲಿಲ್ಲ, ಕೊನೆಗೆ ಮೋಸಹೋದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.