
ಕಡೂರು: ‘ಬೇಸಿಗೆಯಲ್ಲಿ ಜನರನ್ನು ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಮ ವಹಿಸಲಾಗುವುದು’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಯಗಟಿ ಹೋಬಳಿಯ ಕೊತ್ತಿಗೆರೆ ಗ್ರಾಮದಲ್ಲಿ ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಸ್ಥಾಪಿಸಲಾದ ಶುದ್ಧಗಂಗಾ ಕುಡಿಯುವ ನೀರು ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಉಳಿಗೆರೆ, ಮುಗಳಿಕಟ್ಟೆಯಲ್ಲಿ ಘಟಕ ಸ್ಥಾಪನೆ ಪ್ರಗತಿಯಲ್ಲಿದೆ. ಕೊತ್ತಿಗೆರೆಯಲ್ಲಿ ಶಾಸಕರ ನಿಧಿಯಲ್ಲಿ ₹9 ಲಕ್ಷ, ಸಂಸದರ ನಿಧಿಯಲ್ಲಿ ₹6 ಲಕ್ಷ ಒಟ್ಟು ₹15 ಲಕ್ಷ ವೆಚ್ಚದಲ್ಲಿ ಶುದ್ಧಗಂಗಾ ಘಟಕವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ (ಕೆಆರ್ಐಡಿಎಲ್) ನಿರ್ಮಿಸಲಾಗಿದೆ. ಇದೇ ಸಂಸ್ಥೆ ವತಿಯಿಂದ ಮಲ್ಲಾಘಟ್ಟ, ಕಂಚುಕಲ್, ಸಿದ್ದರಾಮನಹಳ್ಳಿ, ರಂಗಪುರ, ಕೆ.ಹೊಸೂರು, ತುರುವನಹಳ್ಳಿ, ಗರ್ಜೆ, ಹಿರೇಬಳ್ಳೇಕೆರೆಯಲ್ಲಿಯೂ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಪಟ್ಟಣಗಳಲ್ಲಿ ಅಮೃತ್ 2, ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.
ಮುಖಂಡ ಶರತ್ ಕೃಷ್ಣಮೂರ್ತಿ ಮಾತನಾಡಿದರು. ಗ್ರಾಮಸ್ಥರಾದ ಮಂಜುನಾಥ್, ಜಯಣ್ಣ, ಉಳಿಗೆರೆ ಪಿಡಿಒ ಸಪ್ನಾ, ಕೆಆರ್ಐಡಿಎಲ್ ಎಂಜಿನಿಯರ್ಗಳಾದ ಗಿರೀಶ್, ಪುನೀತ್, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.