ADVERTISEMENT

ಮೂಡಿಗೆರೆ: ಮಳೆಯಿಂದ ಮಾರುಕಟ್ಟೆಗೆ ಬರದ ಕಾಫಿ

ಮಳೆಗಾಲದಲ್ಲಿ ಬೇಡಿಕೆ ಹೆಚ್ಚಳ, ತೇವಾಂಶ ಹೆಚ್ಚಿರುವ ಕಾಫಿಗೆ ದರ ಕಡಿಮೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:55 IST
Last Updated 22 ಜುಲೈ 2022, 5:55 IST
ಮಳೆಯಿಂದ ನೆಲ ಕಚ್ಚಿರುವ ಕಾಫಿ
ಮಳೆಯಿಂದ ನೆಲ ಕಚ್ಚಿರುವ ಕಾಫಿ   

ಮೂಡಿಗೆರೆ: ಮಳೆಗಾಲ ಬಂತೆಂದರೆ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತೆ. ಅದರಲ್ಲೂ ಈ ಬಾರಿ ಸುರಿದ ಮಳೆ ಕಾಫಿಯನ್ನು ಮಾರುಕಟ್ಟೆಗೆ ತರಲಾಗದ ಸ್ಥಿತಿಯನ್ನು ನಿರ್ಮಾಣ ಮಾಡಿತು.

ಮಾರುಕಟ್ಟೆಗೆ ಕಾಫಿ ಬಾರದ ಕಾರಣ ಕಾಫಿಗೆ ಅದರಲ್ಲೂ, ಪಾರ್ಚ್‌ಮೆಂಟ್‌ಗೆ ದರ ಏರಿಕೆ ಕಂಡಿದೆ. ಒಂದು ವಾರದಲ್ಲಿ ಅರೇಬಿಕಾ ಪಾರ್ಚ್‌ಮೆಂಟ್‌ ಹಾಗೂ ರೊಬಾಸ್ಟಾ ಪಾರ್ಚ್‌ಮೆಂಟ್‌ ಕಾಫಿಗಳೆರಡೂ ಬೆಲೆ ಏರಿಕೆ ಕಂಡಿವೆ. ಅರೇಬಿಕಾ ಪಾರ್ಚ್‌ಮೆಂಟ್‌ ಒಂದು ವಾರದಲ್ಲಿ 50 ಕೆ.ಜಿ. ಚೀಲಕ್ಕೆ ₹300 ಏರಿಕೆ ಕಂಡಿದ್ದರೆ, ರೊಬಾಸ್ಟಾ ಪಾರ್ಚ್‌ಮೆಂಟ್‌ ಒಂದು ವಾರದಲ್ಲಿ ₹ 100 ಏರಿಕೆ ಕಂಡಿದೆ. ಅರೇಬಿಕಾ, ರೊಬಾಸ್ಟಾ ಚೆರಿಗಳೆರಡೂ ಬೆಲೆಯಲ್ಲಿ ಸ್ಥಿರವಾಗಿದ್ದರೂ, ರೊಬಾಸ್ಟಾ ಚೆರಿಯು ₹ 5,000ದ ಗಡಿಯಲ್ಲಿರುವುದು ಉತ್ತಮ ಬೆಲೆಯಾಗಿದೆ. ಆದರೂ ಸಾಗಣೆ ಸಮಸ್ಯೆಯಿಂದ ಉತ್ತಮ ದರವಿದ್ದರೂ ಕಾಫಿಯನ್ನು ಮಾರುಕಟ್ಟೆಗೆ ತರಲಾಗುತ್ತಿಲ್ಲ ಎಂಬುದು ಬೆಳೆಗಾರರ ಅಳಲಾಗಿದೆ.

ಕಾಫಿಯ ಗುಣಮಟ್ಟವನ್ನು ಅದರಲ್ಲಿರುವ ತೇವಾಂಶದ ಆಧಾರದಲ್ಲಿಯೇ ಅಳೆಯಲಾಗುತ್ತದೆ. ತೇವಾಂಶ ಹೆಚ್ಚಿರುವ ಕಾಫಿಗೆ ದರ ಕಡಿಮೆಯಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಒಣಗಿಸಿದ್ದ ಕಾಫಿ ಬೀಜ ಮಳೆಗಾಲದಲ್ಲಿ ತೇವಾಂಶವನ್ನು ಪಡೆಯುವುದರಿಂದ ಬೆಳೆಗಾರರು ನಷ್ಟವನ್ನು ಅನುಭವಿಸುವಂತಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಫಿ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಏರುಮುಖದಲ್ಲಿರುತ್ತದೆ. ಆದರೆ ಸಂಗ್ರಹಿಸಿಡಲು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ, ಕಾಫಿ ಕೊಯ್ಲು ಮುಗಿಯುತ್ತಿದ್ದಂತೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ಕಾಳು ಮೆಣಸು, ಏಲಕ್ಕಿ ಬೆಳೆಗೂ ಇದೇ ಸಮಸ್ಯೆ ಕಾಡುವುದರಿಂದ ಉಪ ಉತ್ಪನ್ನಗಳು ಬೆಳೆಗಾರರಿಗೆ ಮಳೆಗಾಲದಲ್ಲಿ ಕೈ ಕೊಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.