ADVERTISEMENT

ಕೆಎಸ್‌ಆರ್‌ಟಿಸಿ ಬಸ್ ಬಿಡಲು ಆಗ್ರಹ

ಶೃಂಗೇರಿ ಮೂಲಕ ತರೀಕೆರೆ ಭಾಗಕ್ಕೆ ಸಾರಿಗೆ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 4:58 IST
Last Updated 6 ಜನವರಿ 2021, 4:58 IST
ಕೆಎಸ್‌ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)
ಕೆಎಸ್‌ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)   

ನರಸಿಂಹರಾಜಪುರ: ಶೃಂಗೇರಿಯಿಂದ ತರೀಕೆರೆ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಿಡಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಈ ಹಿಂದೆ ಶೃಂಗೇರಿಯಿಂದ ಕೊಪ್ಪ, ಎನ್.ಆರ್.ಪುರ, ಬಿ.ಆರ್.ಪ್ರಾಜೆಕ್ಟ್, ತರೀಕೆರೆ, ಬೀರೂರು, ಕಡೂರು ಮೂಲಕ ಬೆಂಗಳೂರಿಗೆ ಹೋಗುವ ಹಾಗೂ ಬೆಳಿಗ್ಗೆ ಬೆಂಗಳೂರಿನಿಂದ ಈ ಭಾಗಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿತ್ತು. ಇದರಿಂದಾಗಿ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯಕ್ಕೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಅಲ್ಲದೆ, ತರೀಕೆರೆ ಯಲ್ಲಿರುವ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಹೋಗಲು, ಬೆಂಗಳೂರು ಮುಂತಾದ ಭಾಗಗಳಿಗೂ ತೆರಳಲು ಅನುಕೂಲವಾಗಿತ್ತು.

ಪ್ರಸ್ತುತ ಈ ಬಸ್ ಸಂಚಾರ ಪ್ರಸ್ತುತ ಸ್ಥಗಿತಗೊಂಡಿದೆ. ಶೃಂಗೇರಿಯಿಂದ ತರೀಕೆರೆ ಮಾರ್ಗವಾಗಿ ಅಜ್ಜಂಪುರ ಮತ್ತು ಬೀರೂರಿಗೆ ಹೋಗುತ್ತಿದ್ದ ಸಹಕಾರ ಸಾರಿಗೆ ಬಸ್ ಸಂಚಾರವೂ ಸ್ಥಗಿತಗೊಳಿಸಿರುವುದರಿಂದ ಈ ಭಾಗಗಳಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೋಗಬೇಕಾದರೆ ಲಕ್ಕಿನಕೊಪ್ಪ ಗ್ರಾಮಕ್ಕೆ ಹೋಗಿ ಖಾಸಗಿ ಬಸ್ ಮೂಲಕ ಸಂಚರಿಸಬೇಕು. ಇಲ್ಲವೇ ಶಿವಮೊಗ್ಗದ ಮೂಲಕ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ.

ADVERTISEMENT

ಈ ಹಿಂದೆ ಶೃಂಗೇರಿಯಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನಿಂದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾ ಲಯಕ್ಕೆ ವ್ಯಾಸಂಕ್ಕೆ ಹೋಗಿ, ಬರಲು ಸಾರ್ವಜನಿಕರು ವ್ಯಾಪಾರ ವ್ಯವಹಾರಕ್ಕೆ ತರೀಕೆರೆ, ಕಡೂರು, ಬೆಂಗಳೂರಿಗೆ ಹೋಗಲು ಅನುಕೂಲವಾಗಿತ್ತು. ಇದು ಸ್ಥಗಿತಗೊಳಿಸಿರುವುದರಿಂದ ಸಮಸ್ಯೆಯಾಗಿದ್ದು, ಈ ಬಸ್ ಸೇವೆ ಮತ್ತೆ ಆರಂಭಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತ ಮುಖಂಡ ವಿನಾಯಕ್ ಮಾಳೂರುದಿಣ್ಣೆ.

ಈ ಬಗ್ಗೆ ‘ಪ್ರಜಾವಾಣಿ’ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಸಂಪ ರ್ಕಿಸಿದಾಗ, ‘ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಯತ್ನಿಸಲಾಗುವುದು’ ಎಂದರು.

‘ಶೃಂಗೇರಿಯಿಂದ ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು ಭಾಗಕ್ಕೆ ಬಸ್ ಸಂಚಾರ ಆರಂಭಿಸಲು ರಸ್ತೆ ಪರವಾನಗಿ ಲಭಿಸಿಲ್ಲ. ಆರ್‌ಟಿಒ ಕಚೇರಿಯಿಂದ ಪರವಾನಗಿ ಲಭಿಸಿದರೆ ಬಸ್ ಸೇವೆ ಆರಂಭಿಸಲಾಗುವುದು’ ಎಂದು ಚಿಕ್ಕಮಗಳೂರಿನ ಕೆಎಸ್‌ ಆರ್‌ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ವೀರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.