ಕೊಪ್ಪ: ‘ನಾವು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು, ಒಡಕು ಮೂಡಿಸುವ ಕಾರ್ಯ ಮಾಡಬಾರದು. ವಿಶ್ವದ ಭಾವೈಕ್ಯ ಸಂಸ್ಕೃತಿ ಸಾರ ಭಾರತದಲ್ಲಿದೆ' ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತಾಲ್ಲೂಕಿನ ಕುದುರೆಗುಂಡಿಯಲ್ಲಿ ಹಜ್ರತ್ ಸೈಯದ್ ಸಾದತ್ ಷರೀಫುಲ್ ಔಲಿಯಾರವರ ದರ್ಗಾ ಷರೀಫ್ನ 95ನೇ ವಾರ್ಷಿಕ ಉರುಸ್ನ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಯುವಕರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವದಲ್ಲಿ ಪ್ರೀತಿ, ವಿಶ್ವಾಸ, ಸಹೋದರತ್ವ ಅಡಕವಾಗಬೇಕು. ಸಮಸ್ಯೆ ಸೃಷ್ಟಿಸುವ ವ್ಯಕ್ತಿಗಳಾಗದೆ, ಅದನ್ನು ನಿವಾರಿಸುವ ವ್ಯಕ್ತಿಯಾಗಬೇಕು. ಸ್ವಂತ ಧರ್ಮವನ್ನು ಪಾಲಿಸಿ, ಇನ್ನೊಂದು ಧರ್ಮವನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 'ಸರ್ವಧರ್ಮ ಸಮ್ಮೇಳನವು ಜನರಲ್ಲಿ ಸೌಹಾರ್ದ ಬೆಳೆಸುವ ಕಾರ್ಯಕ್ರಮವಾಗಿದೆ. ದರ್ಗಾದ ಅಕ್ಕ ಪಕ್ಕ ಹಿಂದೂ ದೇವಾಲಯಗಳಿದ್ದು, ದರ್ಗದ ಪ್ರದೇಶದಲ್ಲಿ ಚೌಡಮ್ಮನವರ ಗುಡಿಯಿದೆ. ಎಲ್ಲರೂ ಗೌರವಯುತವಾಗಿ ಪೂಜೆ ಮಾಡಿಕೊಂಡು ಬಂದಿದ್ದಾರೆ' ಎಂದರು.
ಜುಮ್ಮಾ ಮಸೀದಿಯ ಖತೀಬ ಜಮಾಲುದ್ದೀನ್ ಅಹ್ಸನಿ ಅವರ ನೇತೃತ್ವದಲ್ಲಿ ಮೌಲೀದ್ ಮಜ್ಲೀಸ್, ಪಟ್ಟಣದಲ್ಲಿ ಸಂಜೆ ದಫ್ ಕಾರ್ಯಕ್ರಮದೊಂದಿಗೆ ಪವಿತ್ರ ಸಂದಲ್ ಮೆರವಣಿಗೆ ನಡೆಯಿತು.
ಮಸ್ದರ್ ಎಜುಕೇಶನಲ್ ಅಂಡ್ ಚಾರಿಟಿ ಮುಖ್ಯಸ್ಥ ಹಾಫೀಝ್ ಮಹಮ್ಮದ್ ಸುಫ್ಯಾನ್ ಸಖಾಫಿ, ಉತ್ತಮೇಶ್ವರ ವೀರಭದ್ರ ಮಹಾಸಂಸ್ಥಾನ ಮಠದ ವೆಂಕಟೇಶ್ ಗುರೂಜಿ ಪ್ರವಚನ ನೀಡಿದರು.
ಕುದುರೆಗುಂಡಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಯು.ನವಾಜ್ ಅಧ್ಯಕ್ಷತೆ ವಹಿಸಿದ್ದರು. ಸ್ವಲಾತ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಮಹಮ್ಮದ್ ಷರೀಪ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಮಲೆನಾಡು ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಶ್, ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್, ಮುಸ್ತಫಾ, ಕಾಂಗ್ರೆಸ್ ಬಾಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಹನೀಫ್, ಕಾಫಿ ಬೆಳೆಗಾರ ಶೌಖತ್, ನುಗ್ಗಿ ಮಂಜುನಾಥ್, ದೀಪಕ್, ಸಿ.ದಿವಾಕರ್, ಪ್ರಶಾಂತ್ ಶೆಟ್ಟಿ, ರಫೀಕ್, ಸಮಿಉಲ್ಲಾ ಮತ್ತಿತರೆ ಗಣ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.