
ನರಸಿಂಹರಾಜಪುರ: ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆ ಜಗತ್ತಿಗೆ ಬೆಳಕಾಗುವಂಥವು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ವಿನಯ್ ಕಣಿವೆ ಹೇಳಿದರು.
ಪಟ್ಟಣದ ಡಿಸಿಎಂಸಿ (ಶಾರದಾ ವಿದ್ಯಾಮಂದಿರ) ರಾಜ್ಯಪಠ್ಯ ಕ್ರಮದ ವಿಭಾಗದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಡಿಸಿಎಂಸಿ ವಿದ್ಯಾಸಂಸ್ಥೆಯ ಕನ್ನಡಕೂಟಗಳ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ಅವರ 122ನೇ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಕುವೆಂಪು ಅವರು ಮಾನವೀಯ ಮೌಲ್ಯಗಳನ್ನು ಸಾರಿದ ಧೀಮಂತ ವ್ಯಕ್ತಿ. ಮಲೆನಾಡಿನ ಬಗ್ಗೆ ಸಾಮಾನ್ಯ ಜನರಿಗೆ ಮನಮುಟ್ಟುವಂತೆ ಬರೆದವರು. ನುಡಿದಂತೆ ನಡೆದ ಮಹಾನ್ ಮಾನವತಾವಾದಿ. ಗ್ರಾಮೀಣ ಬದುಕನ್ನು ಮೈಗೂಡಿಸಿಕೊಂಡಾಗ ಬದುಕು ಹಸನವಾಗುತ್ತದೆ. ಶ್ರೇಷ್ಠ ಜೀವನವಾಗುತ್ತದೆ ಎಂಬುದು ಅವರ ಚಿಂತನೆಯಾಗಿತ್ತು ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರು ಬರೆದಂತೆ ನಡೆದುಕೊಂಡವರು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಲೋಕೇಶ್ ಮಾತನಾಡಿದರು.
ಕಾರ್ಯಕ್ರಮಕ್ಕೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್ ಚಾಲನೆ ನೀಡಿದರು.
ರೋಟರಿ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಅಭಿನಂದನೆ ಸ್ವೀಕರಿಸಿದರು. ಪ್ರಾಂಶುಪಾಲೆ ಪದ್ಮಾರಮೇಶ್, ಮುಖ್ಯಶಿಕ್ಷಕಿ ಲವೀನಾ ಜೂಲಿಯಾನ ಡಿಕೋಸ್ಟ, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜುನಾಥಗೌಡ, ಶಿಕ್ಷಕ ಥಾಮಸ್, ಕೃತಿಕಾ ಮತ್ತು ತಂಡ ಭಾಗವಹಿಸಿದ್ದರು.
ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಶ್ರೀಜಿತ್ ಮತ್ತು ತಂಡ ಪ್ರಥಮ ಸ್ಥಾನ ₹5ಸಾವಿರ, ಅದಿತಿ ಮತ್ತು ತಂಡ ದ್ವಿತೀಯ ಸ್ಥಾನ ₹3ಸಾವಿರ, ತೃತೀಯ ಬಹುಮಾನ ಅಭಿರಾಮ್ ಮತ್ತು ತಂಡಕ್ಕೆ ₹2ಸಾವಿರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.