ADVERTISEMENT

ಚಿಕ್ಕಮಗಳೂರು: ಆ್ಯಸಿಡ್ ದಾಳಿ ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 9:45 IST
Last Updated 15 ಜುಲೈ 2021, 9:45 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮದ ವಿಚ್ಛೇದಿತ ಮಹಿಳೆಗೆ ಆ್ಯಸಿಡ್ ಎರಚಿದ್ದ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ, ತಲಾ ₹ 5 ಲಕ್ಷ ದಂಡವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಗುರುವಾರ ವಿಧಿಸಿದೆ. ನ್ಯಾಯಾಧೀಶರಾದ ಮಂಜುನಾಥ ಸಂಗ್ರೇಶಿ ಈ ಆದೇಶ ನೀಡಿದರು.

ದಂಡದ ಮೊತ್ತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಗರಿಷ್ಠ ಪರಿಹಾರವನ್ನು ಸಂತ್ರಸ್ತೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಶೃಂಗೇರಿ ತಾಲ್ಲೂಕಿನ ಮೆಣಸೆಯ ಗಣೇಶ್ ಅಲಿಯಾಸ್ ಗಣಿ (42), ಮಹಮದ್ ಕಬೀರ್ (36), ವಿನೋದ್ ಕುಮಾರ್ (44), ಅಬ್ದುಲ್ ಮಜಿದ್(44) ಶಿಕ್ಷೆಗೆ ಗುರಿಯಾದವರು.

ಏನಿದು ಪ್ರಕರಣ: ಶೃಂಗೇರಿಯ ಮೆಣಸೆ ಗ್ರಾಮದಲ್ಲಿ 2015 ರ ಏಪ್ರಿಲ್ 18 ರಂದು ಪ್ರಕರಣ ನಡೆದಿತ್ತು. ಗಣೇಶ ಮದುವೆಯಾಗುವಂತೆ ಅದೇ ಊರಿನ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದಿದ್ದ. ಮಹಿಳೆ ತಿರಸ್ಕರಿಸಿದಾಗ ಬೆದರಿಕೆಯೊಡ್ಡಿದ್ದ.

ಶೃಂಗೇರಿಯಲ್ಲಿ ಮಹಿಳೆ ಬ್ಯೂಟಿಪಾರ್ಲರ್ ಇಟ್ಟಕೊಂಡಿದ್ದರು. 2015ರ ಏ.18ರಂದು ರಾತ್ರಿ ಪಾರ್ಲರ್ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರಳಿದ ಮಹಿಳೆ ಮನೆಯ ಗೇಟು ತೆಗೆಯುವಾಗ ಹಿಂಬದಿಯಲ್ಲಿ ಬೈಕಿನಲ್ಲಿದ್ದ ಇಬ್ಬರು (ಮಜಿದ್, ಕಬೀರ್) ಹೊರನಾಡಿನ ರಸ್ತೆ ಕೇಳುವ ನೆಪದಲ್ಲಿ ಮಾತನಾಡಿಸಿ ಆ್ಯಸಿಡ್ ಎರಚಿದ್ದರು. ರಾತ್ರಿ 8.45ರ ಹೊತ್ತಿನಲ್ಲಿ ಘಟನೆ ನಡೆದಿತ್ತು. ಪಾರ್ಲರ್ ನಿಂದ ಮಹಿಳೆ ಹೊರಟ ಬಗ್ಗೆ ವಿನೋದ್ ಕುಮಾರ್ ಅವರಿಬ್ಬರಿಗೆ ಮಾಹಿತಿ ನೀಡಿದ್ದ.

ಮಹಿಳೆಯ ಬಲಗಣ್ಣು ಪೂರ್ಣ ಸುಟ್ಟಿತ್ತು. ಎಡಗಣ್ಣಿಗೆ ಭಾಗಶಃ ಹಾನಿಯಾಗಿತ್ತು. ಮೈ, ಕೈ, ಕಾಲು ಸುಟ್ಟಿತ್ತು. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಸುಧೀರ್ ಹೆಗಡೆ ತನಿಖೆ ನಡೆಸಿ ಕೋರ್ಟ್‌ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಸ್.ಮಮತಾ ವಾದ ಮಂಡಿಸಿದ್ದರು.

**
ಆರು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದಿತ್ತು. ಕೋರ್ಟ್ ಮೇಲೆ ನಂಬಿಕೆ ಇತ್ತು. ನ್ಯಾಯ ಸಿಕ್ಕಿದೆ.
-ಸಂತ್ರಸ್ತೆ

ಬಂಧಿತ ಆರೋಪಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT