ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪುರಸಭೆಯ ಮುಖ್ಯಾಧಿಕಾರಿ ಎಚ್.ಎನ್. ಮಂಜುನಾಥ್ ಅವರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಚೇರಿಯಲ್ಲಿ ಮಂಜುನಾಥ್ ಅವರು ಲತಾ ಎಂಬವರಿಂದ ₹ 10 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಕಡೂರಿನ ವೆಂಕಟೇಶ್ವರನಗರದ ರಘು ಪತ್ನಿ ಲತಾ ಅವರು ದಾನವಾಗಿ ಬಂದಿದ್ದ ನಿವೇಶವನ್ನು ಖಾತೆ ಮಾಡಿಕೊಡಲು ಪುರಸಭೆ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯಾಧಿಕಾರಿ ಮಂಜುನಾಥ್ ಅವರು ಖಾತೆ ಮಾಡಿಕೊಡಲು ₹ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ನಿರಾಕರಿಸಿದಾಗ ₹ 10 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದರು.
ಲತಾ ಅವರು ಚಿಕ್ಕಮಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿವೈಎಸ್ಪಿ ಸಿ.ಆರ್.ಗೀತಾ, ಇನ್ಸ್ಪೆಕ್ಟರ್ ಎನ್. ಮಂಜುನಾಥ್, ಕೆ.ಜಿ. ರಾಥೋಡ್ ತಂಡ ಕಾರ್ಯಾಚರಣೆ ನಡೆಸಿದ್ದರು.
ಆರೋಪಿ ಮಂಜುನಾಥ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.