ಶೃಂಗೇರಿ: ನವರಾತ್ರಿಯ ಐದನೇ ದಿನ ಶಾರದಾ ಮಠದ ಶಾರದೆ ಆದಿಶಕ್ತಿಯು ಕೈಯಲ್ಲಿ ಶಕ್ತ್ಯಾಯುಧವನ್ನು ಧರಿಸಿ, ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿದರು.
ಮಧ್ಯಾಹ್ನ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಶಾರ
ದಾಂಬೆಗೆ ವಿಶೇಷಪೂಜೆ ಸಲ್ಲಿಸಿದರು.
ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಗಳು ನೆರವೇರಿದವು.
ಬೀದಿ ಉತ್ಸವ: ಶಾರದಾ ಮಠದಲ್ಲಿ ಸಂಜೆ ನಡೆದ ಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದ್ದರು. ಸಿದ್ಧ ಸಮಾಧಿ ಯೋಗದ ಧ್ಯಾನಿಗಳು ಹಾಗೂ ಸದ್ಭಾವನಾ ಸಂಘ, ವೈಕುಂಠಪುರ ಗೆಳೆಯರ ಬಳಗ, ಪ್ರಕೃತಿ ರೈತ ಸ್ವಸಹಾಯ ಸಂಘ ಮತ್ತು ಕನ್ಯಾಕುಮಾರಿ ಮಹಿಳಾ ಸ್ವಸಹಾಯ ಸಂಘ, ತಾಲ್ಲೂಕು ಒಕ್ಕಲಿಗರ ಸಂಘ, ಯುವ ಒಕ್ಕಲಿಗರ ವೇದಿಕೆ, ಕೂತಗೋಡು ಸಹ್ಯಾದ್ರಿ ಸಂಘ, ಪಾಂಡುರಂಗ ವಿಠಲ ಸೇವಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ-ಸಂಸ್ಥೆಗಳು, ವಿವಿಧ ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಶ್ರೇಯಾ ಹಾಗೂ ವೃಂದದವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.
ದರ್ಬಾರು: ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ತೊಟ್ಟಿಯಿಂದ ಶಾರದಾಮ್ಮನವರ ದೇವಾಲಯಕ್ಕೆ ಉತ್ಸವದಲ್ಲಿ ಚಿತ್ತೈಸಿದರು. ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಗುರುಗಳು ಆಸೀನರಾದರು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.
ನವರಾತ್ರಿ ಸಡಗರ
ಕಳಸ: ಮುನ್ನೂರುಪಾಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿದಿನ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಾನಗಳ ಜೊತೆ ಅನ್ನಸಂತರ್ಪಣೆ ನಡೆಯುತ್ತಿವೆ. ದೇವಿಗೆ ವಿಶಿಷ್ಟ ಅಲಂಕಾರ ಮಾಡಲಾಗುತ್ತಿದೆ.
ಶೃಂಗೇರಿ ಶ್ರೀಗಳ ಪಾದುಕೆಯನ್ನು ಇಲ್ಲಿಗೆ ತರಲಾಗಿದ್ದು, ವಿಜಯ ದಶಮಿವರೆಗೆ ದರ್ಶನಕ್ಕೆ ಇಡಲಾಗಿದೆ. ಪ್ರತಿದಿನ ಪಾದುಕೆಗೆ ಅಷ್ಟೋತ್ತರ, ಅರ್ಚನೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.