ADVERTISEMENT

ನೇಹದ ನೇಯ್ಗೆ ರಂಗೋತ್ಸವಕ್ಕೆ ಚಾಲನೆ

ಆರು ದಿನಗಳ ರಂಗೋತ್ಸವ: ನಟ ಕಿಶೋರ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 22:08 IST
Last Updated 27 ಮಾರ್ಚ್ 2024, 22:08 IST
ರಂಗೋತ್ಸವಕ್ಕೆ ನಟ ಕಿಶೋರ್ ಚಾಲನೆ ನೀಡಿದರು. ನಟ ಪ್ರಕಾಶ್ ರಾಜ್ ಇದ್ದರು
ರಂಗೋತ್ಸವಕ್ಕೆ ನಟ ಕಿಶೋರ್ ಚಾಲನೆ ನೀಡಿದರು. ನಟ ಪ್ರಕಾಶ್ ರಾಜ್ ಇದ್ದರು   

ಚಿಕ್ಕಮಗಳೂರು: ನಿರ್ದಿಗಂತದ ವತಿಯಿಂದ ನಗರದಲ್ಲಿ ಆರು ದಿನಗಳ ಕಾಲ ನಡೆಯಲಿರುವ ‘ನೇಹದ ನೇಯ್ಗೆ’ ರಂಗೋತ್ಸವಕ್ಕೆ ಬುಧವಾರ ಚಾಲನೆ ದೊರೆತಿದೆ.

ನಗರದ ಕುವೆಂಪು ಕಲಾಮಂದಿರದಲ್ಲಿ ನಾಟಕ, ಸಂಗೀತ, ಚಿತ್ರ, ಸಿನಿಮಾ, ಸಾಹಿತ್ಯಗಳ ಸಮ್ಮಿಲನದೊಂದಿಗೆ ನಡೆಯುವ ರಂಗೋತ್ಸವಕ್ಕೆ ನಟ ಕಿಶೋರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಈ ರಂಗೋತ್ಸವದ ವಾತಾವರಣವು ಹೊಸತನದಿಂದ ಕೂಡಿದ್ದು, ಸದಭಿರುಚಿಯ ಕಲಾತ್ಮಕವಾಗಿ ಪ್ರಯೋಗಗೊಳ್ಳುತ್ತಿದೆ. ಇದನ್ನು ನೋಡುತ್ತಿದ್ದರೆ ನನಗೂ ರಂಗಭೂಮಿಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ಮೂಡುತ್ತಿದೆ. ಈ ಹಂಬಲದ ಬೀಜ ಹೆಮ್ಮರವಾಗಿ ನನ್ನಲ್ಲಿ ಬೆಳೆಯಲಿ. ರಂಗೋತ್ಸವ ಯಶಸ್ವಿಯಾಗಿ ಇನ್ನೂ ಹೆಚ್ಚು ಹೆಚ್ಚು ರಂಗಭೂಮಿ ಕೈಂಕರ್ಯ ಸಾಧಿತವಾಗಲಿ’ ಎಂದು ಆಶಿಸಿದರು.

ADVERTISEMENT

ಅದಕ್ಕೂ ಮುನ್ನ ರಂಗೋತ್ಸವದ ಕುರಿತು ಆಶಯದ ನುಡಿಗಳನ್ನಾಡಿದ ನಟ ಪ್ರಕಾಶ್ ರಾಜ್, ‘ರಂಗೋತ್ಸವವು ಕಲೆಗಳ ಸಮ್ಮೇಳನವಾಗಿದ್ದು, ಈ ಹಿಂದೆ ರಂಗಭೂಮಿಯಲ್ಲಿ ಸಾಹಿತ್ಯ, ಚಿತ್ರಕಲೆ, ಕಲಾಕೃತಿ ನಾಟಕ ಎಲ್ಲವೂ ಮೇಳೈಸಿ ರಂಗಭೂಮಿ ಶ್ರೀಮಂತವಾಗಿತ್ತು. ಆ ಕಾಲ ಮರುಕಳಿಸುವ ಆಶಯದಿಂದ ಎಲ್ಲ ಕಲೆಗಳ ‘ನೇಹದ ನೇಯ್ಗೆ’ ಇದಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಕಲೆಯ ಮೂಲಕ ಮಾನವೀಯತೆ ಸಾರುವ ಪ್ರಯತ್ನ ನಿರ್ದಿಗಂತದ್ದಾಗಿದೆ’ ಎಂದರು.

ಶ್ರವಣ ಹೆಗ್ಗೋಡು ನಿರ್ದೇಶನದ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ನಾಟಕವನ್ನು ‘ಕಲಾಭಿ ಮಂಗಳೂರು’ ತಂಡ ಪ್ರಸ್ತುತಿ ಪಡಿಸಿತು. ನಿರ್ದಿಗಂತ ತಂಡದಿಂದ ಹಾಡುಗಳನ್ನು ಪ್ರಸ್ತುತಿ ಪಡಿಸಲಾಯಿತು.

‘ಜಿಲ್ಲೆಯ ರಂಗಭೂಮಿ ಕಲಾವಿದರನ್ನು ಒಳಗೊಂಡಂತೆ ಪ್ರತಿದಿನ ಪ್ರದರ್ಶನಗೊಂಡ ನಾಟಕದ ಕುರಿತು ಚರ್ಚೆ, ರಂಗ ತಜ್ಞರೊಂದಿಗೆ ಮಾತುಕತೆ ನಡೆಯಲಿದೆ. ದೇಶ ಹಾಗೂ ವಿದೇಶಗಳ ಕಲೆಗಳ ಬಗ್ಗೆಯೂ ಸಂವಾದ ನಡೆಯಲಿದೆ. ಸಂಗೀತ ಮತ್ತು ರಂಗ ಸಂಗೀತ ಕಾರ್ಯಕ್ರಮಗಳೂ ನಡೆಯಲಿವೆ. ಒಂದು ವಾರಗಳ ಕಾಲ ಭಾಗವಹಿಸುವ ರಂಗಾಸಕ್ತರಿಗೆ ರಂಗ ಮತ್ತು ಸಂಸ್ಕೃತಿಯ ತರಬೇತಿ ದೊರೆತಂತೆ ಆಗಲಿದೆ’ ಎಂದು ಆಯೋಜಕರು ಹೇಳಿದರು.

 ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ನಾಟಕವನ್ನು ‘ಕಲಾಭಿ ಮಂಗಳೂರು’ ತಂಡ ಪ್ರಸ್ತುತಿ ಪಡಿಸಿತು

‘ಲೀಕ್‌ ಔಟ್‌’ ‘ತಪ್ಪಿದ ಎಳೆ’ ನಾಟಕ ಇಂದು

ರಂಗೋತ್ಸವ ಅಂಗವಾಗಿ ಗುರುವಾರ(ಮಾ.28) ಬೆಳಿಗ್ಗೆ 9.30 ರಿಂದ ರಂಗ ಸಂವಾದ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅಕ್ಷತಾ ಪಾಂಡವಪುರ ನಿರ್ದೇಶನದ ‘ಲೀಕ್ ಔಟ್’ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 5.30ಕ್ಕೆ ಮೈಸೂರಿನ ರಿದಂ ಅಡ್ಡಾ ತಂಡದಿಂದ ಲಯವಾಧ್ಯ ಸಮ್ಮಿಳನ 7.30ಕ್ಕೆ ಎಚ್‌.ಕೆ.ಶ್ವೇತಾರಾಣಿ ನಿರ್ದೇಶನದ ‘ತಪ್ಪಿದ ಎಳೆ’ ನಾಟಕ ಪ್ರದರ್ಶನವಾಗಲಿದ್ದು  ಚಿಕ್ಕಮಗಳೂರಿನ ಅಭಿನಯ ಯುವವೇದಿಕೆ ಪ್ರಸ್ತುತಿ ಪಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.