ನರಸಿಂಹರಾಜಪುರ: ಪೂರೈಕೆ ಹೆಚ್ಚಾಗಿ, ಬೇಡಿಕೆಯಲ್ಲಿ ಕುಸಿತ ಕಂಡಿರುವುದರಿಂದ ಬಾಳೆಕಾಯಿ ದರದಲ್ಲಿ ತುಸು ಇಳಿಕೆಯಾಗಿದೆ. ಆದರೆ, ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾವಣೆ ಆಗಿಲ್ಲ.ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರದಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ.
ಹಬ್ಬಗಳ ಹಂಗಾಮಿನಲ್ಲಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಮತ್ತು ಮತ್ತು ಬೆಲೆ ಇರುತ್ತದೆ. ಈ ಬಾರಿ ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆಕಾಯಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಇಳಿದಿದೆ ಎನ್ನುತ್ತಾರೆ ವರ್ತಕರು.
ತಾಲ್ಲೂಕಿನಲ್ಲಿ ಬೆಳೆಯುವ ನೇಂದ್ರಬಾಳೆ ಮತ್ತು ಪುಟ್ಟಬಾಳೆಯನ್ನು ಮಂಗಳೂರು, ಉಡುಪಿ, ಕೇರಳ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ಆದರೆ, ಕೇರಳ, ತಮಿಳುನಾಡಿನಿಂದ ಈಗ ನೇಂದ್ರಬಾಳೆ ಮಂಗಳೂರು ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವುದರಿಂದ, ಸ್ಥಳೀಯ ಬಾಳೆಗೆ ಬೇಡಿಕೆ ತುಸು ಕಡಿಮೆಯಾಗಿದೆ. ಚಿಪ್ಸ್ ತಯಾರಿಕೆಗಾಗಿ ನೇಂದ್ರ ಬಾಳೆ ಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸದ್ಯ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ನೇಂದ್ರಬಾಳೆಕಾಯಿಗೆ ₹48 ರಿಂದ ₹50ರಷ್ಟು ದರ ಲಭಿಸುತ್ತಿದೆ. ಹಣ್ಣು ಖರೀದಿಸುವ ಗ್ರಾಹಕ ಇದರ ದುಪ್ಪಟ್ಟು ದರ ತೆತ್ತಬೇಕಿದೆ.
ತಾಲ್ಲೂಕಿನಲ್ಲಿ ಬಾಳೆಯನ್ನು ರಬ್ಬರ್, ಅಡಿಕೆ ಮತ್ತಿತರ ವಾಣಿಜ್ಯ ಬೆಳೆಗಳ ಮಧ್ಯೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತಿತ್ತು. ರಬ್ಬರ್, ಅಡಿಕೆ ಗಿಡಗಳು ಬೆಳವಣಿಗೆಯಾಗಿ ತೋಟ ಅಭಿವೃದ್ಧಿಯಾಗಿರುವುದರಿಂದ ಅಂತರ್ ಬೆಳೆಯಾಗಿ ಬಾಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ರೈತರು ಮಿಶ್ರ ಬೆಳೆಗಿಂತ ವಾಣಿಜ್ಯ ಸ್ವರೂಪದಲ್ಲಿ ಬಾಳೆ ಬೆಳೆಯಲು ಒಲವು ತೋರುತ್ತಿದ್ದಾರೆ. ಉತ್ತಮ ಬೆಲೆ ಬಂದಿರುವುದರಿಂದ ವಾಣಿಜ್ಯ ಸ್ವರೂಪದಲ್ಲಿ ನೇಂದ್ರಬಾಳೆ ಬೆಳೆದವರಿಗೆ ಈಗ ಹೆಚ್ಚಿನ ಲಾಭ ಸಿಗುತ್ತಿದೆ. ಆದರೆ, ಪಚ್ಚಬಾಳೆ, ರಸಬಾಳೆ ಬೆಳೆದವರಿಗೆ ನಿರೀಕ್ಷಿಸಿದಷ್ಟು ಲಾಭ ಕೈಗೆ ಬರುತ್ತಿಲ್ಲ.
ಕ್ರಿಸ್ಮಸ್ ಹಾಗೂ ಹೊಸವರ್ಷ ಸಮೀಪಿಸುತ್ತಿರುವುದರಿಂದ ಚಿಪ್ಸ್ ಮತ್ತಿತರ ಉದ್ದೇಶಕ್ಕೆ ನೇಂದ್ರ ಬಾಳೆಗೆ ಬೇಡಿಕೆ ಹೆಚ್ಚಿದೆ. ಆದರೆ, ಆನೆಹಾವಳಿ, ಜಾಗದ ಕೊರತೆಯಿಂದ ನೇಂದ್ರ ಬಾಳೆ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಸದ್ಯ ಉಳಿದ ಪುಟ್ಟ ಬಾಳೆ, ರಸಬಾಳೆ, ಪಚ್ಚಬಾಳೆಗೆ ಹೋಲಿಸಿದರೆ ನೇಂದ್ರ ಬಾಳೆಗೆ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ ಎಂದು ಶೆಟ್ಟಿಕೊಪ್ಪದ ಧನ್ಯ ವೆಜಿಟೆಬಲ್ಸ್ ಮಾಲೀಕ ಎಲ್ದೋ ಹೇಳಿದರು.
ಸುವರ್ಣ ಗೆಡ್ಡೆ ಬೆಲೆ ಏರಿಕೆಯಾಗಿದ್ದು ಕೆ.ಜಿಗೆ ₹45 ದರ ಇದೆ. ತಾಲ್ಲೂಕಿನಿಂದ ಮಂಗಳೂರು, ಕುಂದಾಪುರ. ಗೋವಾ, ಬೆಂಗಳೂರು ಮಾರುಕಟ್ಟೆಗೂ ಸುವರ್ಣಗೆಡ್ಡೆ ಪೂರೈಕೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.