ADVERTISEMENT

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಯೋಧ ರಾಜಪ್ಪಗೆ ಅದ್ದೂರಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:40 IST
Last Updated 11 ಜೂನ್ 2025, 15:40 IST
ಕಳಸದ ಕೆಪಿಎಸ್ ಶಾಲೆಯಲ್ಲಿ ಬುಧವಾರ ಯೋಧ ರಾಜಪ್ಪ ಅವರನ್ನು ಕಳಸ ತಾಲ್ಲೂಕು ಆಡಳಿತ ಮತ್ತು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. 
ಕಳಸದ ಕೆಪಿಎಸ್ ಶಾಲೆಯಲ್ಲಿ ಬುಧವಾರ ಯೋಧ ರಾಜಪ್ಪ ಅವರನ್ನು ಕಳಸ ತಾಲ್ಲೂಕು ಆಡಳಿತ ಮತ್ತು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.    

ಕಳಸ: ಕಳೆದ ತಿಂಗಳು ಕಾಶ್ಮೀರದಲ್ಲಿ ನಡೆದ ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಕಳಸದ ಯೋಧ ಬಿ.ಡಿ.ರಾಜಪ್ಪ ಅವರನ್ನು ಪಟ್ಟಣದಲ್ಲಿ ಬುಧವಾರ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಹಳುವಳ್ಳಿಯ ದಂದಾಡಿ ನಿವಾಸಿ ರಾಜಪ್ಪ ಆಪರೇಷನ್ ಸಿಂಧೂರದಲ್ಲಿ ಕಾಲಿಗೆ ಗಾಯಗೊಂಡು ರಜೆಯ ಮೇಲೆ ಮಂಗಳವಾರ ಕಳಸ ತಲುಪಿದ್ದರು. ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆಗಿರುವ ಅವರನ್ನು ಕಳಸ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ಗೌರವ ಸಲ್ಲಿಸಿದರು.

ಕಳಸ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಕಾವ್ಯಾ ಮತ್ತು ಸಿಬ್ಬಂದಿ ಮೈಸೂರು ಪೇಟ ತೊಡಿಸಿದರು. ವಿವಿಧ ಸಂಘಟನೆಗಳು, ಗ್ರಾಮ ಪಂಚಾಯಿತಿಗಳು, ವಿವಿಧ ಇಲಾಖೆಗಳು, ರಾಜಕೀಯ ಪಕ್ಷಗಳು ಗೌರವಿಸಿದವು. ಅನ್ನಪೂರ್ಣೇಶ್ವರಿ ಮೋಟರ್ಸ್ ಮಾಲೀಕ ಕೆ.ಕೆ ಬಾಲಕೃಷ್ಣ ಭಟ್, ರಾಜಪ್ಪ ಮತ್ತು ಅವರ ಪತ್ನಿಗೆ ಉಚಿತ ಬಸ್ ಪಾಸ್ ವಿತರಿಸಿದರು.

ADVERTISEMENT

ಪಟ್ಟಣದ ಪ್ರಬೋಧಿನಿ ವಿದ್ಯಾಕೇಂದ್ರದ ವಿದ್ಯಾರ್ಥಿ ಒಂದು ವರ್ಷ ಉಳಿಸಿದ ಹಣವನ್ನು ಕೊಟ್ಟು ಗಮನ ಸೆಳೆದ. ಕಳಸದ ಮುಖ್ಯ ರಸ್ತೆ ಮತ್ತು ರಥಬೀದಿಯಲ್ಲಿ ಅಲಂಕೃತ ವಾಹನದಲ್ಲಿ ಯೋಧನ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಜನರು ಹೂಗಳನ್ನು ಎರಚಿ, ಹೂಮಾಲೆ ಹಾಕಿ ಸಡಗರಪಟ್ಟರು. ಕಳಸೇಶ್ವರ ದೇವಸ್ಥಾನದ ಬಳಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜಪ್ಪ ದೇಶಸೇವೆಯಂತಹ ಪುಣ್ಯದ ಕೆಲಸ ಇಲ್ಲ. ತವರಿನ ಜನರ ಪ್ರೀತಿ ಕಂಡು ತಾಯ್ನಾಡಿನ ಸೇವೆ ಮಾಡಲು ಇನ್ನಷ್ಟು ಪ್ರೇರಣೆ ಬಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.