ADVERTISEMENT

ಕಾಡಾನೆ ತಿವಿದು ಮೃತಪಟ್ಟ ಕಾರ್ಮಿಕನ ಶವ ಇಟ್ಟು ಪ್ರತಿಭಟನೆ: ಲಾಠಿ ಪ್ರಹಾರ

ಅರಣ್ಯ ಕಚೇರಿಗೆ ಮುತ್ತಿಗೆ ಯತ್ನ; ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 13:54 IST
Last Updated 9 ಸೆಪ್ಟೆಂಬರ್ 2022, 13:54 IST
   

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಊರುಬಗೆ ಸಮೀಪ ಕಾಡಾನೆ ತಿವಿದು ಮೃತಪಟ್ಟ ಕಾರ್ಮಿಕ ಅರ್ಜುನ್‌ ಶವವನ್ನು ಶುಕ್ರವಾರ ಅರಣ್ಯ ಕಚೇರಿ ಮುಂದೆ ಇಟ್ಟು, ಕಚೇರಿ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕಾರ್ಮಿಕನ ಸಾವಿಗೆ ಕಾರಣವಾದ ಆನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಮೂಡಿಗೆರೆ – ಬೇಲೂರು ರಸ್ತೆಯ ಅರಣ್ಯ ಕಚೇರಿ ಬಳಿ ಮಧ್ಯಾಹ್ನ ಜಮಾಯಿಸಿದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಬಂದ್‌ ಆಗಿತ್ತು. ಸ್ಥಳೀಯರು, ರೈತ ಸಂಘ, ಬೆಳೆಗಾರರ ಸಂಘದವರು ಪಾಲ್ಗೊಂಡಿದ್ದರು. ಘೋಷಣೆಗಳನ್ನು ಕೂಗಿದರು. ಅರಣ್ಯ ಕಚೇರಿ ಆವರಣದ ಗೇಟು ತೆಗೆದು ಒಳಕ್ಕೆ ನುಗ್ಗಿದರು.

ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು. ಪರಸ್ಪರ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಪ್ರತಿಭಟನಾಕಾರರು ಕಚೇರಿಯೊಳಕ್ಕೆ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರು ಅಡ್ಡಲಾಗಿ ವಾಹನ ನಿಲ್ಲಿಸಿದರು. ವಾಹನವನ್ನು ದಾಟಿಕೊಂಡು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಿದರು.

ಸೆ. 8ರಂದು ಊರುಬಗೆಯ ಕಾರ್ಮಿಕ ಅರ್ಜುನ್‌ ಕೂಲಿ ಕಾಯಕ ಮುಗಿಸಿ ಸಂಜೆ ಮನೆಗೆ ವಾಪಸಾಗುವಾಗ ಕಾಡಾನೆ ಅಟ್ಟಿಸಿಕೊಂಡು ಹೋಗಿ ತುಳಿದು ಹೊಸಕಿ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.