ನರಸಿಂಹರಾಜಪುರ: ತಾಲ್ಲೂಕಿನ ಕಾನೂರು ಮತ್ತು ಹರಾವರಿ ಗ್ರಾಮದ ಮನೆಗಳಿಂದ ಕಳವಾಗಿದ್ದ ₹3.30ಲಕ್ಷ ಮೌಲ್ಯದ 74 ಗ್ರಾಂ ಚಿನ್ನ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಸಂತೆಕೊಪ್ಪ ಕ್ಯಾದಗೆರೆ ಗ್ರಾಮದ ನಿವಾಸಿ ಚಾಲಕ ಮಹಮ್ಮದ್ ಹನೀಫ್ ಕಳ್ಳತನ ಮಾಡಿದ ಆರೋಪದ ಮೇಲೆ ಬಂಧಿತ ಆರೋಪಿ.
2019ರ ನವೆಂಬರ್ 30ರಂದು ಕಾನೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಾಗ ಮನೆಯ ಬಾಗಿಲು ಮುರಿದು ಸುಮಾರು ₹74 ಸಾವಿರ ಮೊತ್ತದ ಚಿನ್ನದ ಒಡವೆಗಳನ್ನು ಕಳವು ಮಾಡಲಾಗಿತ್ತು.
ಇದೇ ದಿನ ಹರಾವರಿ ಗ್ರಾಮದ ಕೂಲಿ ಕಾರ್ಮಿಕರೊಬ್ಬರ ಮನೆಯ ಬೀಗ ಮುರಿದು ₹1.45ಲಕ್ಷ ಮೊತ್ತದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಎಸ್ಪಿ ಎಂ.ಎಚ್.ಅಕ್ಷಯ್ ಇನ್ಸ್ಪೆಕ್ಟರ್ ವಸಂತ್ ಎಸ್. ಭಾಗವತ್ ಪಿಎಸ್ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನ. 26ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿದ್ದ ಮಹಮ್ಮದ್ ಹನೀಫ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಾನೂರು ಮತ್ತು ಹರಾವರಿ ಗ್ರಾಮಗಳ ಮನೆಗಳಿಂದ ಚಿನ್ನ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕಳವಾಗಿದ್ದ ಚಿನ್ನವನ್ನು ಆರೋಪಿಯಿಂದ ವಶಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.