ಚಿಕ್ಕಮಗಳೂರು: ‘ಸಿದ್ದರಾಮಯ್ಯ ಅವರು ಅನುದಾನ ಮೀಸಲಿಡದೆ 11 ಲಕ್ಷ ವಸತಿಗೆ ಮಂಜೂರಾತಿ ನೀಡಿದ್ದರು. ಅನುದಾನ ಮೀಸಲಿಟ್ಟಿದ್ದರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸುವ ಸ್ಥಿತಿ ಇರುತ್ತಿರಲಿಲ್ಲ, ಅವರೇ ದರಿದ್ರದ ಮೂಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಛೇಡಿಸಿದರು.
ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಡವರು ಬೀದಿಯಲ್ಲಿ ಕಣ್ಣೀರು ಹಾಕಲು ಸಿದ್ದರಾಮಯ್ಯ ಅವರೇ ಕಾರಣ. ಅನುದಾನ ಮೀಸಲಿಡದೆ ವರ್ಷಕ್ಕೆ ಎರಡ್ಮೂರು ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಚುನಾವಣೆ ವರ್ಷದಲ್ಲಿ (2018) 11 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿದ್ದಾರೆ’ ಎಂದು ಕುಟುಕಿದರು.
ರಾಮನಗರದಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಸಮಾವೇಶದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಡಿ.ಕೆ.ಶಿವಕುಮಾರ್ ತಾನು ಸ್ವಯಂ ಸೇವಕ ಎಂದು ಸದನದಲ್ಲಿ ಪರಿಚಯಿಸಿಕೊಂಡಿದ್ದಾರೆ. ಸಂಘದ ಪ್ರಾರ್ಥನೆಯನ್ನೂ ಹೇಳಿದ್ದಾರೆ. ಸ್ವಯಂಸೇವಕ ಆಗಿದ್ದರೆ ಪಾಲ್ಗೊಳ್ಳುತ್ತಾರೆ, ಆ ಭಾವನೆ ಇದ್ದರೆ ಒಳ್ಳೆಯದನ್ನೇ ಬಯಸುತ್ತಾರೆ’ ಎಂದು ಉತ್ತರಿಸಿದರು.
‘ಸತ್ಯ ಹೇಳಿದರೆ ಪ್ರಚೋದನೆ ಎಂದುಕೊಳ್ಳಬಾರದು. ಸತ್ಯ ಒಪ್ಪಿಕೊಳ್ಳುವ ಮನಸ್ಥಿತಿ ಇರುವವರಿಗೆ ಸತ್ಯ ಮತ್ತು ಪ್ರಚೋದನೆ ಯಾವುದು ಎಂಬುದು ಗೊತ್ತಿರುತ್ತದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.