ADVERTISEMENT

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಾಂದಿ ಬಂದ್

ಜಿಲ್ಲೆಯ ವಿವಿಧೆಡೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 7:05 IST
Last Updated 4 ಜುಲೈ 2022, 7:05 IST
ಹಾಂದಿ ಮುಖ್ಯವೃತ್ತದಲ್ಲಿ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಹಾಂದಿ ಮುಖ್ಯವೃತ್ತದಲ್ಲಿ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.   

ಆಲ್ದೂರು: ಟೇಲರ್‌ ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಇಲ್ಲಿಗೆ ಸಮೀಪವಿರುವ ಹಾಂದಿ ಮುಖ್ಯವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಭಾನುವಾರ ಪ್ರತಿಭಟನೆ ನಡೆಯಿತು.

ಕನ್ಹಯ್ಯ ಲಾಲ್‌ ಹತ್ಯೆ ಮಾಡಿರುವ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿ.ಎಚ್.ಪಿ ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್, ‘ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೇ ಆತಂಕದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಇಂತಹ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡದೆ ಆದಷ್ಟು ಬೇಗ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕು.ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಹಾಂದಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರವರೆಗೂ ಬಂದ್‌ಗೆ ಕರೆ ನೀಡಲಾಗಿತ್ತು. ಸ್ಥಳೀಯ ಅಂಗಡಿಗಳು ಮುಚ್ಚಿದ್ದವು. ಭಾನುವಾರದ ಸಂತೆ ನಡೆಯಲಿಲ್ಲ. ಬಿಜೆಪಿ ಮುಖಂಡ ಅಶೋಕ್ ಸೂರಪ್ಪನಹಳ್ಳಿ, ಹೋಬಳಿ ಅಧ್ಯಕ್ಷ ಸುದರ್ಶನ್, ತುಡುಕೂರು ಮಂಜು, ಸ್ವರೂಪ್ ಗೌಡ ಕಬ್ಬಿಣ ಸೇತುವೆ, ಭೂತನಕಾಡು ನಾಗೇಶ್, ಯೋಗೇಶ್ ತೋಳೂರು, ಫಾಸ್ಟ್ ಫುಡ್ ಮಂಜು, ಇದ್ದರು.

ADVERTISEMENT

'ಕಠಿಣ ಶಿಕ್ಷೆ ನೀಡಿ'

ಕೊಟ್ಟಿಗೆಹಾರ:ಟೇಲರ್‌ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಬಾಳೂರು ಹೋಬಳಿಯ ಜಾವಳಿ, ನಿಡುವಾಳೆ, ಕೂವೆಯ ಗಬ್ಗಲ್‌ನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಬಾಳೂರು ಹೋಬಳಿಯ ಎಲ್ಲಾ
ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಹಿಂದೂ ಯುವಕರನ್ನು ಗುರಿಯಾಗಿಸಿ ಹತ್ಯೆ ಮಾಡಿರುವ ಉಗ್ರರಿಗೆ ಗರಿಷ್ಠ ಶಿಕ್ಷೆ ನೀಡಬೇಕು. ಇಂತಹ ದೇಶದ್ರೋಹಿ ಉಗ್ರರಿಂದ ಸಮಾಜದಲ್ಲಿ ಅಶಾಂತಿಯ ತಲೆದೋರುತ್ತಿದ್ದು ಸಮಾಜದ ಸ್ವಾಸ್ಥ್ಯ ಕದಡುವುದರ ಜತೆಗೆ ಕೋಮು ಗಲಭೆಗೆ ಸಂಚು ರೂಪಿಸುವ ಷಡ್ಯಂತ್ರ ನಡೆಯುತ್ತಿದೆ'ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂಥವರನ್ನು ಶಿಕ್ಷಿಸಿದರೆ ಮಾತ್ರ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸುವುದಿಲ್ಲ' ಎಂದರು.

ರಘು ಸಕಲೇಶಪುರ ಮಾತನಾಡಿ ‘ದೇಶದಲ್ಲಿ ಹಿಂದೂಗಳ ಕೊಲೆ ಹಿಂದೆ ತಾಲಿಬಾನ್ ಕೈವಾಡವಿದೆ. ತಾಲಿಬಾನ್ ರೀತಿಯಲ್ಲಿಯೇ ಹತ್ಯೆ ನಡೆಯುತ್ತಿದೆ. ಇಂತಹ ಉಗ್ರರನ್ನು ಮಟ್ಟ ಹಾಕದಿದ್ದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ'ಎಂದರು.

ಬಿಜೆಪಿ ಜಿಲ್ಲಾ ಘಟಕದ ವಕ್ತಾರ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಸುನಿಲ್ ಶೆಟ್ಟಿ, ಮರ್ಕಲ್ ವಿಜೇಂದ್ರ, ಶಶಿಕುಮಾರ್, ಶಶಿಧರ್, ನವೀನ್ ಹಾವಳಿ, ಶಾಮಣ್ಣ ಬಣಕಲ್, ಟಿ.ಎಂ.ಗಜೇಂದ್ರ, ಹಳೇಕೋಟೆ ಮನೋಜ್, ಕೃಷ್ಣ ಟೈಲರ್, ದಿನಕರ್ ಕೂವೆ, ಶಿವರಾಜ್ ಕಲ್ಮನೆ, ಪಂಚಾಕ್ಷರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.