ಗುಡ್ಡೇತೋಟ (ಬಾಳೆಹೊನ್ನೂರು): ನ್ಯಾಯಬೆಲೆ ಪಡಿತರ ಅಂಗಡಿಯನ್ನು ಗುಡ್ಡೇತೋಟದಿಂದ ಶಾಂತಿಗ್ರಾಮಕ್ಕೆ ಸ್ಥಳಾಂತರಿಸಿದ್ದನ್ನು ವಿರೋಧಿಸಿ ಪಡಿತರ ಚೀಟಿದಾರರು ಸೋಮವಾರ ಗುಡ್ಡೇತೋಟ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹೂವಿನಗುಂಡಿಯ ಕೀರ್ತಿರಾಜ್, ‘ಹಲವು ದಶಕಗಳಿಂದ ತೀರ್ಥಕೆರೆ, ಹೂವಿನಗುಂಡಿ, ಭದ್ರಾ ಎಸ್ಟೇಟ್, ಗುಂಡಪ್ಪ ಮೈದಾನದ ಸುಮಾರು 204 ಕಾರ್ಡುದಾರರಿಗೆ ಗುಡ್ಡೇತೋಟದಲ್ಲೇ ಪಡಿತರ ವಿತರಿಸಲಾಗುತ್ತಿತ್ತು. ಆದರೆ, ಇದೀಗ ನೆಟ್ವರ್ಕ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ. ಲ್ಯಾಂಪ್ ಸೊಸೈಟಿ ನ್ಯಾಯಬೆಲೆ ಅಂಗಡಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ಅದರ ಕೈಯಲ್ಲಿ ನಿರ್ವಹಣೆ ಸಾಧ್ಯವಾಗದಿದ್ದಲ್ಲಿ ಬಿಟ್ಟುಕೊಡಲಿ. ಸ್ವಸಹಾಯ ಸಂಘಗಳು ಎಲ್ಲವನ್ನೂ ನಡೆಸಲು ಶಕ್ತವಾಗಿವೆ’ ಎಂದರು.
ಸ್ಥಳಕ್ಕೆ ಬಂದ ಆಹಾರ ಶಿರಸ್ತೇದಾರ್ ಶ್ರೀಕಾಂತ್ ಮಾತನಾಡಿ, ‘ಸ್ಥಳೀಯ ಗ್ರಾಮ ಪಂಚಾಯತಿ ಸಹಕಾರ ಪಡೆದು ಒಂದು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದ ಕೊಠಡಿಯಲ್ಲಿ ಗ್ರಾಹಕರ ಬೆರಳಚ್ಚು ಪಡೆಯಲು ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದಾಗಿ ಪಡಿತರ ಪಡೆಯಲು ಶಾಂತಿಗ್ರಾಮಕ್ಕೆ ಸ್ಥಳೀಯರು ತೆರಳುವುದು ತಪ್ಪಲಿದೆ. ಗ್ರಾಹಕರ ಬೇಡಿಕೆಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು. ಜಿಲ್ಲಾಡಳಿತ ಕೈಗೊಳ್ಳುವ ತೀರ್ಮಾನಕ್ಕೆ ಇಲಾಖೆ ಬದ್ಧವಾಗಿದೆ’ ಎಂದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವನಿತಾ, ಮುಖಂಡರಾದ ರಾಜೀವ್, ಬಶೀರ್, ಶ್ರೀಧರ ಪೂಜಾರ್, ವಿಷ್ಣು, ರವಿ, ಪಿಎಸೈ ಸತೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.