ಕಳಸ: ದೇಶದಲ್ಲಿ ಪ್ರಜಾಪ್ರಭುತ್ವ ಎಂದರೆ ರಾಜಕೀಯ ಕ್ಷೇತ್ರವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಪ್ರಜೆಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಕುದುರೆಮುಖದ ಕೆಂಗನಕೊಂಡದಲ್ಲಿ ಭಾನುವಾರ ಆರಂಭವಾದ ಜನಶಕ್ತಿ ಸಂಘಟನೆಯ ಸಂಘಟನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಮಾಡಿದ ಮಾತ್ರಕ್ಕೆ ನಮ್ಮ ಹಕ್ಕು ಮುಗಿಯುವುದಿಲ್ಲ. ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದಕ್ಕಬೇಕು. ಕೇವಲ ಮೀಸಲಾತಿಯಿಂದ ಇದು ದಕ್ಕುವುದಿಲ್ಲ. ಎಲ್ಲ ಜಾತಿ ವರ್ಗದವರಿಗೂ ಉದ್ಯೋಗ, ರಾಜಕೀಯ, ಆರ್ಥಿಕತೆಯಲ್ಲಿ ಸಮಾನ ಅವಕಾಶ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.
ಜನರ ಸಮಸ್ಯೆಗಳು ಬಗೆಹರಿಯಲು ಜನಪರ ಚಳವಳಿ ಬೇಕು. ರಾಜಕಾರಣದಿಂದ ಸಾಧ್ಯವಾಗದಿರುವುದನ್ನು ಜನಜಾಗೃತಿ ಮತ್ತು ಚಳವಳಿಗಳಿಂದ ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲ ಕೆ.ಪಿ.ಶ್ರೀಪಾಲ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎಲ್.ಅಶೋಕ್, ಕಲ್ಕುಳಿ ವಿಠಲ ಹೆಗ್ಡೆ, ಕೆಂಗನಕೊಂಡ ಸುರೇಶ್ ಭಟ್, ಅತ್ತಿಕುಳಿ ಸುಂದರೇಶ್, ಗುರುಮೂರ್ತಿ ಹಾಗಲಗಂಚಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಜನಶಕ್ತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನೂರ್ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗೌಸ್ ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ಮುಖಂಡರಾದ ಕಿರಣ್ ಕಮಲ್ ಪ್ರಸಾದ್, ಬಸವರಾಜ್ ಕೌತಾಳ್, ಶೃಂಗೇಶ್, ಸತೀಶ್ ಜೈನ್, ಕೆ.ಎಲ್.ವಾಸು, ಸುರೇಶ್ ಗಡಿಕಲ್, ರಾಧಾ ಹಾಗಲಗಂಚಿ, ರಾಜ್ಯದ ವಿವಿಧ ಭಾಗಗಳಿಂದ ಜನಶಕ್ತಿ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
ಒಳಮೀಸಲಾತಿ ಬಗ್ಗೆ ನಾನು ಸರ್ಕಾರಕ್ಕೆ ವರದಿ ಕೊಟ್ಟೆ. ಆದರೆ ಅದನ್ನು ಜಾರಿಗೆ ತರುವಲ್ಲಿ ತಪ್ಪುಗಳು ನಡೆಯುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಎಲ್ಲರೂ ನಮಿಸುತ್ತಾರೆ. ಆದರೆ ಒಳಮೀಸಲಾತಿ ವರದಿಯನ್ನು ಸರಿಯಾಗಿ ಜಾರಿ ಮಾಡಲಿಲ್ಲ.ಎಚ್.ಎನ್.ನಾಗಮೋಹನ್ ದಾಸ್ ನಿವೃತ್ತ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.