ಶೃಂಗೇರಿ (ಚಿಕ್ಕಮಗಳೂರು): ಪಟ್ಟಣ ಸಮೀಪದ ಭಾರತಿನಗರ ಮತ್ತು ಬನಶಂಕರಿ ಬಡಾವಣೆ ನಿವಾಸಿಗಳು ಹಣ ಕ್ರೋಡೀಕರಿಸಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಡಾಂಬರೀಕರಣಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಬಡಾವಣೆ ಇದಾಗಿದೆ. ಮುಖ್ಯ ರಸ್ತೆ ಸಹಿತ ಮನೆಗಳಿಗೆ ಸಂಪರ್ಕಿಸುವ ರಸ್ತೆ ಗುಂಡಿಯಿಂದ ಕೂಡಿದ್ದು, ಮಳೆಗಾಲದಲ್ಲಿ ಕೆಸರು ಹಾಗೂ ಬೇಸಿಗೆಯಲ್ಲಿ ದೂಳಿನಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಬಡಾವಣೆಯಲ್ಲಿ 350ಕ್ಕೂ ಹೆಚ್ಚು ನಿವೇಶನಗಳಿದ್ದು, 200ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಮೂಲ ಸೌಕರ್ಯ ವಂಚಿತವಾಗಿರುವ ಬಡಾವಣೆಗೆ ಗ್ರಾಮ ಪಂಚಾಯಿತಿಯಿಂದ ಬೀದಿದೀಪ ಮಾತ್ರ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಲಭ್ಯವಾಗಿಲ್ಲ. ಗ್ರಾಮ ಪಂಚಾಯಿತಿ ಈ ವರ್ಷ ಚರಂಡಿ ನಿರ್ಮಾಣಕ್ಕಾಗಿ ₹2 ಲಕ್ಷ ಮೀಸಲಿಟ್ಟಿದ್ದು ಹೊರತು ಪಡಿಸಿದರೆ ಬೇರೆ ಅನುದಾನ ನೀಡಿಲ್ಲ ಎಂಬುದು ಬಡಾವಣೆ ನಿವಾಸಿಗಳ ಆರೋಪ.
ಮುಖ್ಯ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಲು ಪಣತೊಟ್ಟ ನಿವಾಸಿಗಳು ₹15.75 ಲಕ್ಷ ದೇಣಿಗೆ ಸಂಗ್ರಹ ಮಾಡಿದ್ದು, 286 ಮೀಟರ್ ರಸ್ತೆ ನಿರ್ಮಾಣವಾಗಿದೆ. ಇನ್ನೂ 330 ಮೀಟರ್ ರಸ್ತೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ನಿವಾಸಿಗಳು ಸಂಘ ರಚಿಸಿಕೊಂಡಿದ್ದಾರೆ.
ರಸ್ತೆಯನ್ನು ಸೇವೆಗೆ ಮುಕ್ತಗೊಳಿಸಿದ ಸಂದರ್ಭದಲ್ಲಿ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.