ಚಿಕ್ಕಮಗಳೂರು:‘ಸಮಾಜದ ಹುಳುಕುಗಳನ್ನು ಜನರ ಆಡು ಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞ’ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರರಾಗಿ 16ನೇ ಶತಮಾನದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ ಸಂತರಾಗಿದ್ದರೆಂದ ಅವರು ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಸಮಾಜದಲ್ಲಿ ಎಲ್ಲ ವರ್ಗದ ಹಾಗೂ ಎಲ್ಲ ರಂಗಗಳಲ್ಲಿರುವ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ಚೇತನರಾಗಿದ್ದರು. ಅವರ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯವಾಗಲಿದೆ ಎಂದರು.
ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕುಂಬಾರ ಸಮಾಜ ತನ್ನ ವಂಶಪಾರಂಪರವಾಗಿ ಬಂದಿರುವ ಸಾಂಪ್ರದಾಯ ಕಲೆಗಳನ್ನು ಉಳಿಸಿ ಬಳಸಿಕೊಂಡು ಹೋಗಬೇಕು ಎಂದು ಹೇಳಿದರು.
ಉಪತಹಶೀಲ್ದಾರ್ ರಾಮರಾವ್ ದೇಸಾಯಿ ಮಾತನಾಡಿ, ಸರ್ವಜ್ಞರ ಹೆಸರೇ ಸೂಚಿಸಿದಂತೆ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಮೌಢ್ಯತೆಯನ್ನು ತೆಗೆದು ಹಾಕಲು ಹಾಗೂ ತ್ರಿಪದಿಗಳ ಮೂಲಕ ಜಾಗೃತಿ ಮೂಡಿಸಿದ್ದ ಮಹಾನ್ ಸಂತ, ಸರ್ವಜ್ಞನ ಕವಿಯಾಗಿ ಪ್ರಸಿದ್ಧಿ ಹೊಂದಿದ್ದರು ಎಂದರು.
ವೇದಮೂರ್ತಿ ಅವರು ಸಂತ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕುಂಬಾರ ಸಮಾಜದ ಮುಖಂಡರುಗಳಾದ ಎಂ.ಬಿ.ಅಶೋಕ್ ಕುಮಾರ್, ಕೆ.ಎಂ.ಗಂಗಾಧರ್, ಪರಮೇಶ್, ಜಯ ಪ್ರಕಾಶ್, ಏಕಾಂತ್ ರಾಮು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.