ಆಲ್ದೂರು: ರೈತರ ಆರ್ಥಿಕ ಚಟುವಟಿಕೆಗೆ ಸಹಕಾರ ಸಂಘಗಳೇ ಮುಖ್ಯ ಕೇಂದ್ರಗಳು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಸತ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಚಗೊಂಡನಹಳ್ಳಿ ಶಾಖಾ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ‘ರೈತ ಪರವಾದ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಮುಖ್ಯ ಗುರಿ. ಹಿಂದಿನ ವರ್ಷ ಎರಡೂವರೆ ಲಕ್ಷ ರೈತರಿಗೆ ಹೊಸ ಸಾಲ ವಿತರಣೆ ಮಾಡಿದ್ದು, ಈ ವರ್ಷ 3 ಲಕ್ಷ ರೈತರಿಗೆ ಹೊಸ ಸಾಲ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
ಅತಿವೃಷ್ಟಿಯ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರವನ್ನು ಬಿಟ್ಟಾಗ ಹೋರಾಟ ನಡೆಸಿ ಸೇರ್ಪಡೆ ಮಾಡಿಸಿದ್ದೇನೆ. ಹೀಗಾಗಿ, 3,800 ರೈತರಿಗೆ ಪರಿಹಾರ ಶೀಘ್ರವೇ ಸಿಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈರಪ್ಪಗೌಡ ಮಾತನಾಡಿ, ‘ಸಂಘ ಪ್ರಾರಂಭವಾಗಿ 79 ವರ್ಷ ಪೂರೈಸಿದ್ದು, ಎ ಶ್ರೇಣಿಯನ್ನು ಹೊಂದಿರುತ್ತದೆ. ಸಂಘದ ವ್ಯಾಪ್ತಿ ತೋಳೂರು, ಹಾಂದಿ, ಭೂತನಕಾಡು, ಮಾಚಗೊಂಡನಹಳ್ಳಿ ಗ್ರಾಮಗಳನ್ನು ಒಳಗೊಂಡಿದ್ದು 1,750 ಷೇರುದಾರರು ಇದ್ದಾರೆ’ ಎಂದರು.
ಸಂಘದ ನಿರ್ದೇಶಕ ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಕೆಳಗೂರು ಸಂಘದ ನಿರ್ದೇಶಕ ಸತೀಶ್ ಗೊಬ್ಬರದ ಅಭಾವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಂಘದ ನಿವೃತ್ತ ಸಿಇಒ ಎಚ್.ಜಿ. ವಿಜಯ್ ಕುಮಾರ್, ನಿವೃತ್ತ ಪಿಡಿಒ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಡಿ.ನಾಗೇಶ್, 16 ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ ಉಮೈಸಾರ, ಗುತ್ತಿಗೆದಾರ ಜೈಪಾಲ್ ಅವರನ್ನು ಸನ್ಮಾನಿಸಲಾಯಿತು.
ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಹಿರಾ ಬಾನು, ಸಂಘದ ಉಪಾಧ್ಯಕ್ಷೆ ಜೆ.ಎಸ್. ಹೇಮಾವತಿ ತೀರ್ಥಪ್ಪ, ನಿರ್ದೇಶಕರಾದ ಬಿ.ಸಿ.ಲೋಕಪ್ಪಗೌಡ, ಅತೀಪುರ್ ರೆಹಮಾನ್, ಮೊಹಮದ್ ಮುದಾಪೀರ್, ವೈ.ಎಂ. ಚಂದ್ರಶೇಖರ್, ತೀರ್ಥ ಸತೀಶ್, ಜಿ.ಮಹಮ್ಮದ್ ಜಕಾಉಲ್ಲಾ, ಎಸ್.ಎಂ.ಗಂಗಯ್ಯ, ಎಸ್.ಪಿ.ರಘು, ಕೆ.ಆರ್.ರಘು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.