ADVERTISEMENT

ಜಗತ್ತಿನ ಶಾಂತಿ, ಸಂಸ್ಕೃತಿಯ ಭೂಮಿ ಭಾರತ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

ಸಖರಾಯಪಟ್ಟಣ ಸಮೀಪ ಕಾಳಹಸ್ತೀಶ್ವರ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:38 IST
Last Updated 7 ಫೆಬ್ರುವರಿ 2026, 5:38 IST
ಕಡೂರು ತಾಲ್ಲೂಕು ಸಖರಾಯಪಟ್ಟಣದಲ್ಲಿ ಶುಕ್ರವಾರ ನಡೆದ ಶ್ರೀಕಾಳಹಸ್ತೀಶ್ವರ ದೇವಾಲಯದ ಲೋಕಾರ್ಪಣೆ ಮತ್ತು ಬ್ರಹ್ಮಕಲಶ ಮಹೋತ್ಸವವನ್ನು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಶಂಕರಾತ್ಮಾನಂದ ಸ್ವಾಮೀಜಿ, ವಿರೂಪಾಕ್ಷ ಘನಲಿಂಗ ಸ್ವಾಮೀಜಿ, ಬಸವ ಮರುಳಸಿದ್ದ ಸ್ವಾಮೀಜಿ, ಸಿ.ಟಿ.ರವಿ, ಸುಜ್ಞಾನಮೂರ್ತಿ ಭಾಗವಹಿಸಿದ್ದರು
ಕಡೂರು ತಾಲ್ಲೂಕು ಸಖರಾಯಪಟ್ಟಣದಲ್ಲಿ ಶುಕ್ರವಾರ ನಡೆದ ಶ್ರೀಕಾಳಹಸ್ತೀಶ್ವರ ದೇವಾಲಯದ ಲೋಕಾರ್ಪಣೆ ಮತ್ತು ಬ್ರಹ್ಮಕಲಶ ಮಹೋತ್ಸವವನ್ನು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಶಂಕರಾತ್ಮಾನಂದ ಸ್ವಾಮೀಜಿ, ವಿರೂಪಾಕ್ಷ ಘನಲಿಂಗ ಸ್ವಾಮೀಜಿ, ಬಸವ ಮರುಳಸಿದ್ದ ಸ್ವಾಮೀಜಿ, ಸಿ.ಟಿ.ರವಿ, ಸುಜ್ಞಾನಮೂರ್ತಿ ಭಾಗವಹಿಸಿದ್ದರು   

ಸಖರಾಯಪಟ್ಟಣ (ಕಡೂರು): ‘ಜಗತ್ತಿನಲ್ಲಿ ಎಲ್ಲರೂ ಬಯಸುವ ಶಾಂತಿ ಮತ್ತು ಸಂಸ್ಕೃತಿಯ ತವರು ಭರತಭೂಮಿಯಾಗಿದ್ದು, ನಮ್ಮ ಸಂಸ್ಕೃತಿ ವಿಶ್ವಮಾನ್ಯವಾಗಿದೆ’ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಕಡೂರು ತಾಲ್ಲೂಕು ಸಖರಾಯಪಟ್ಟಣ ಹೊರವಲಯದ ಕಡೇಕಾಲುವೆ ಬಳಿಯಲ್ಲಿ ಶುಕ್ರವಾರ ಶ್ರೀಕಾಳಹಸ್ತೀಶ್ವರ ದೇವಾಲಯದ ಲೋಕಾರ್ಪಣೆ ಮತ್ತು ಬ್ರಹ್ಮಕಲಶ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ತಾಯಂದಿರು ಬಾಲ್ಯದಿಂದಲೇ ಧಾರ್ಮಿಕ ಒಲವು ಮೂಡಿಸಿ, ಸನಾತನ ಪರಂಪರೆಯ ಉಳಿವಿಗೆ ಗಟ್ಟಿ ತಳಹದಿ ರೂಪಿಸಬೇಕು. ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು ಬದುಕಿಗೆ ಮಾರ್ಗದರ್ಶಕವಾಗಬೇಕು. ಜೀರ್ಣೋದ್ಧಾರವು ಪುಣ್ಯದ ಕೆಲಸವಾಗಿದೆ. ನಿರಾಕಾರ ಪರಮಾತ್ಮನಿಗೆ ಸಗುಣ ರೂಪ ನೀಡುವ ಶಿಲ್ಪಿಯ ನೈಪುಣ್ಯವೇ ಭಗವಂತನ ಸಾಕ್ಷಾತ್ಕಾರದ ದಾರಿಯಾಗಿದ್ದು, ಧಾರ್ಮಿಕ ನೆಲೆಗಟ್ಟಿನ ಮೇಲೆ ಲೌಕಿಕ ಬದುಕು ನಡೆಸಿ ಮೋಕ್ಷ ಪಡೆಯಿರಿ ಎಂದು ಸಲಹೆ ನೀಡಿದರು.

ADVERTISEMENT

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಘನಲಿಂಗ ಸ್ವಾಮೀಜಿ, ‘ದೇವಾಲಯಗಳು ಧರ್ಮದ ದಾರಿದೀಪಗಳಾಗಿವೆ. ಈ ಪುರಾತನ ದೇವಾಲಯದಲ್ಲಿ ಧಾರ್ಮಿಕ ಚಿಂತನೆಗಳು, ನಿರಂತರ ಸೇವೆಗಳು ನಡೆಯಬೇಕು’ ಎಂದರು.

ವಡ್ಡನಹಾಳ್‌ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ‘ವಿಶ್ವಕರ್ಮ ಸಮುದಾಯದವರು ಜಗತ್ತಿಗೆ ಶಿಲ್ಪಕಲೆಯ ಮೂಲಕ ನೀಡಿದ ಕೊಡುಗೆ ನಮ್ಮ ದೇಶದ ಪರಂಪರೆಗೆ ಹಿರಿಮೆ ತಂದಿದೆ. ಭಗವಂತ ಯಾರ ಸ್ವತ್ತೂ ಅಲ್ಲ ಎಂದು ತಿಳಿದು ಎಲ್ಲರ ಸಹಕಾರ ಪಡೆದು ಈ ದೇವಾಲಯ ಮುನ್ನಡೆಸಿರಿ. ಇದೊಂದು ಅತ್ಯುತ್ತಮ ಭಕ್ತಿ ಮತ್ತು ಶ್ರದ್ಧೆಯ ಸಂಗಮ ಸ್ಥಳವಾಗಲಿ’ ಎಂದು ಆಶಿಸಿದರು.

ದೊಡ್ಡಕುರುಬರ ಹಳ್ಳಿಯ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಶಿಷ್ಟ ಶಕ್ತಿಗಳ ಮಹತ್ಯ ಬೆಳಕಿಗೆ ಬರಲೆಂದೇ ಕೆಲವು ಸಮಯದಲ್ಲಿ ದುಷ್ಟ ಶಕ್ತಿಗಳು ವಿಜೃಂಭಿಸುತ್ತವೆ. ಎಂತಹ ಕಠಿಣ ಸನ್ನಿವೇಶದಲ್ಲಿಯೂ ಧರ್ಮಕ್ಕೆ ಗೆಲುವು ಎಂಬ ನಂಬಿಕೆ ಇರಲಿ ಎಂದರು.

ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ಎಷ್ಟೇ ಆಕ್ರಮಣಗಳಾದರೂ ತನ್ನ ಮೂಲಸಂಸ್ಕೃತಿ ಉಳಿಸಿಕೊಂಡಿರುವ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಯುವಪೀಳಿಗೆಯಲ್ಲಿ ಈ ಅರಿವು ಮೂಡಿಸಿ ಮುಂದೆಯೂ ಪರಂಪರೆ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ. ಬದುಕಿನ ಜಂಜಾಟದಲ್ಲಿ ಜನರು ನೆಮ್ಮದಿ ಅರಸಿ ಬರುವ ತಾಣಗಳೇ ದೇವಾಲಯಗಳಾಗಿವೆ. ಇಲ್ಲಿ ಶೀಘ್ರ ರಸ್ತೆ ನಿರ್ಮಿಸಿ, ಅಭಿವೃದ್ಧಿಗೆ ನೆರವಾಗುವುದಾಗಿ ಭರವಸೆ ನೀಡಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಪಿ.ಸುಜ್ಞಾನಮೂರ್ತಿ, ಕಡೂರು ತಹಶೀಲ್ದಾರ್‌ ಸಿ.ಎಸ್‌. ಪೂರ್ಣಿಮಾ, ಗಾಯತ್ರಿ ಶಾಂತೇಗೌಡ ಮಾತನಾಡಿದರು. ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್‌ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು. 

ದೇವಾಲಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಾಚಾರ್‌ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಟ್ರಸ್ಟ್‌ನ ನೇಮಿರಾಜ್‌, ಜಯಕೀರ್ತಿ, ಗುರುದತ್‌, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಲೋಹಿತ್‌, ಬಿಜೆಪಿ ಮುಖಂಡ ಎಚ್‌.ಸಿ. ಕಲ್ಮರುಡಪ್ಪ, ಓಂಕಾರಮೂರ್ತಿ, ದಿವಾಕರ ಅಗ್ನಿಹೋತ್ರಿ, ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜದ ಅಧ್ಯಕ್ಷ ಚಂದ್ರಶೇಖರಾಚಾರ್‌ ಇದ್ದರು.

ಕಡೂರು ತಾಲ್ಲೂಕು ಸಖರಾಯಪಟ್ಟಣದಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡ ಶ್ರೀಕಾಳಹಸ್ತೀಶ್ವರ

‘ಹಿಂದುತ್ವ ಭಾವದಿಂದ ಬದುಕೋಣ’

‘ಭಗವಂತನು ಪಂಚತತ್ವಗಳ ಮೂಲಕ ಎಲ್ಲದರಲ್ಲಿಯೂ ಅಡಕವಾಗಿದ್ದಾನೆ. ಜಗತ್ತು ಹಾಗೂ ಸೃಷ್ಟಿಗೆ ಅವಿನಾಭಾವ ಸಂಬಂಧವಿದ್ದು ಪಂಚಭೂತಗಳೇ ಇದರ ಮೂಲ. ಸಾಮುದಾಯಿಕ ಪೂಜೆಯಿಂದ ಇಡೀ ಸಮಾಜಕ್ಕೆ ಒಳಿತಾಗಬೇಕು ಎನ್ನುವ ಉದ್ದೇಶದಿಂದಲೇ ದೇವಾಲಯಗಳ ಸ್ಥಾಪನೆ ಮೊದಲಿನಿಂದಲೂ ನಡೆದಿದೆ. ಜಾತಿಯ ಬಗ್ಗೆ ಅಭಿಮಾನ ತಪ್ಪಲ್ಲ.

ಆದರೆ ಅದನ್ನು ಹೊರತಾಗಿಸಿ ಜಾತಿ ಶ್ರೇಷ್ಠತೆಯ ಅಹಂಕಾರ ಆದಾಗ ಸಮಾಜಕ್ಕೆ ಸಮಸ್ಯೆಯಾಗುತ್ತದೆ. ಜಾತಿ ಹೋಗಲಾಡಿಸುವ ಯತ್ನ ಮಾಡಿದವರ ಹೆಸರಿನಲ್ಲಿಯೇ ಜಾತಿಗಳ ಸೃಷ್ಟಿಯಾಗುತ್ತಿರುವುದು ಚೋದ್ಯದ ಸಂಗತಿ. ನಾವೆಲ್ಲ ಒಂದು ಸಮಾಜವಾಗಿ ಹಿಂದುತ್ವ ಭಾವದಿಂದ ಬದುಕೋಣ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

26ಕ್ಕೆ ಶಿಷ್ಯ ಸ್ವೀಕಾರ ಮತ್ತು ಸನ್ಯಾಸ ದೀಕ್ಷೆ

  ಅರೆಮಾದನಹಳ್ಳಿ ಪೀಠಕ್ಕೆ ಫೆ. 26ರ ಫಾಲ್ಗುಣ ಶುದ್ಧ ದಶಮಿಯಂದು ಶಿಷ್ಯ ಸ್ವೀಕಾರ ಮತ್ತು ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಇನ್ನು ಮೂರು ವರ್ಷಗಳಲ್ಲಿ ಸುಜ್ಞಾನ ಸ್ವಾಮಿಗಳಿಂದ ಪೀಠದ ಸ್ಥಾಪನೆಯಾಗಿ ಸಹಸ್ರಮಾನ ತುಂಬಲಿದ್ದು ಅದನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುವಂತಾಗಬೇಕು ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.